ಸೋಮವಾರ, ಮಾರ್ಚ್ 14, 2016

ಭಾರತದ ಗ್ರಾಹಕ ಹಕ್ಕು ನಿಯಮಗಳು ಗಟ್ಟಿಗೊಳ್ಳಲಿ

1962 ರ ಮಾರ್ಚ್ 15 ರಂದು ಜಾನ್ ಎಫ್ ಕೆನಡಿಯವರು ಅಮೇರಿಕಾದ ಸೆನೆಟ್ ನಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ನೀಡಿದ್ದರು, ಆ ಭಾಷಣದಲ್ಲಿ ಮುಖ್ಯವಾಗಿ  ಮಾಹಿತಿಯ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು ಮತ್ತು ದೂರನ್ನ ನೀಡುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮುಂದಿನ ದಿನಗಳಲ್ಲಿ ಈ ನಾಲ್ಕು ಹಕ್ಕುಗಳನ್ನೇ ಆಧಾರವನ್ನಾಗಿಸಿಕೊಂಡು ಅಮೇರಿಕಾದಲ್ಲಿ (Consumer Bill of Rights) ಕಾನೂನು ರೂಪಿಸಲಾಯಿತು. ಇದರ ನೆನಪಿಗಾಗಿ  ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ 15 ರಂದು ಗ್ರಾಹಕ ಹಕ್ಕುಗಳ ದಿನವೆಂದು ಅಚರಿಸಲಾಗುತ್ತದೆ. 
ಬಹುಪಾಲು ಎಲ್ಲಾ ದೇಶದಲ್ಲೂ ಮೇಲೆ ತಿಳಿಸಿದ ಹಕ್ಕುಗಳನ್ನು ಆಧಾರವಾಗಿರಿಸಿಕೊಂಡು ಗ್ರಾಹಕ ಹಕ್ಕುಗಳ ಕಾಯಿದೆಯನ್ನು ರೂಪಿಸಲಾಗಿದೆ.

ಭಾರತ ಒಕ್ಕೂಟದಲ್ಲೂ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಕಾಯಿದೆಯನ್ನು 1986 ರೂಪಿಸಲಾಗಿದೆ (Consumer Protection Act 1986 ) .  ಮೇಲ್ನೋಟಕ್ಕೆ ಈ ಕಾಯಿದೆಯಿಂದ ಗ್ರಾಹಕ ಹಕ್ಕುಗಳು ಕಾಪಾಡಲ್ಪಡುತ್ತವೆ ಎನಿಸಿದರೂ, ನಿಜಾಂಶದಲ್ಲಿ ಭಾರತದಂತಹಾ ವೈವಿದ್ಯತೆಯಿಂದ ಕೂಡಿದ ಒಕ್ಕೂಟದಲ್ಲಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲು ವಿಫಲವಾಗಿರುವುದು ಕಾಣುತ್ತದೆ.

ಭಾರತ ಒಕ್ಕೂಟವು ಭಾಷಾ ವೈವಿಧ್ಯತೆಯಿಂದ ಕೂಡಿದ್ದು ಗ್ರಾಹಕ ಹಕ್ಕುಗಳನ್ನು ರೂಪಿಸುವಾಗ ಭಾಷಾ ವೈವಿಧ್ಯತೆಯನ್ನು ಪರಿಗಣನೆಗೆ 
ತೆಗೆದುಕೊಂಡಾಗ ಮಾತ್ರ  ಕಾಯಿದೆಯು ಪರಿಣಾಮಕಾರಿಯಾಗಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕ ಹಕ್ಕುಗಳನ್ನು ರೂಪಿಸುವಾಗ ಬರಿಯ ಹಿಂದಿ/ಇಂಗ್ಲೀಶ್ ಭಾಷಿಕರನ್ನು ಮಾತ್ರ ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಿರುವುದು ಎದ್ದು ಕಾಣಿಸುತ್ತದೆ. ಉದಾಹರಣೆಗೆ- ಔಷಧಿಯ ವಿಷಯವಾಗಿ (drugs and cosmetics rules 1945)  ಕಾಯಿದೆಯನ್ನು ರೂಪಿಸಲಾಗಿದ್ದು, ಔಷಧಿಯ ಮೇಲೆ ಇಂಗ್ಲೀಶ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಇರಬೇಕೆಂದು ತಿಳಿಸಲಾಗಿದೆ. ಇದು ಹಿಂದಿ/ಇಂಗ್ಲೀಶ್ ತಿಳಿಯದ ಕೊಟ್ಯಾಂತರ ಜನರನ್ನು ತಮ್ಮ ಹಕ್ಕುಗಳಿಂದ ವಂಚಿತರಾಗುವಂತೆ ಮಾಡಿದೆ. ಔಷಧಿಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದೇ ಸಾವು ನೋವು ಕೂಡ ಸಂಭವಿಸಬಹುದಾಗಿದೆ.  ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಡಿಯೊಡ್ರೆಂಟ್ ನ ಬಳಕೆಯ ಬಗ್ಗೆ ತಿಳಿಯದೇ, ಡಿಯೋಡ್ರೆಂಟ್ ನ್ನು ಸರಿಯಾಗಿ ಬಳಕೆ ಮಾಡದಿದ್ದರಿಂದ ಯುವತಿಯೊಬ್ಬಳು ಸಾವನ್ನಪಿದ್ದನ್ನು ಸ್ಮರಿಸಬಹುದು.  ಇದೇ ರೀತಿಯಲ್ಲಿ ಮತ್ತೊಂದು ಪ್ರಮುಖ ಕಾಯಿದೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ, ಅಂಗಡಿಗಳಲ್ಲಿ ಪ್ಯಾಕೆಟ್ ನಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡಲೆಂದು ರೂಪಿಸಿರುವ FSSAI ನ Packaging and Labelling Regulations, 201 l ರಲ್ಲಿ ಆಹಾರ ಪದಾರ್ಥದ ಬಗ್ಗೆ ಎಲ್ಲಾ ಮಾಹಿತಿಯು ಇಂಗ್ಲೀಶ್ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು, ಬೇರೆ ಭಾಷೆಯಲ್ಲಿ ಮಾಹಿತಿ ಇದ್ದರೆ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಕಂಪನಿಗಳು ಇಂಗ್ಲೀಶ್ ಅಥವಾ ಹಿಂದಿಯಲ್ಲಿ ಮಾಹಿತಿ ನೀಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬರುವಂತೆ ಸರಕಾರವೇ ದಾರಿಮಾಡಿಕೊಟ್ಟಿದೆ. ಕೆಲವು ದಿನಗಳ ಹಿಂದೆ ಆಹಾರ ಉತ್ಪನ್ನಗಳ ಮೇಲೆ 'ಎಕ್ಸ್ ಪೈರಿ ಡೇಟ್' ಇರಬೇಕೇ ಅಥವಾ 'ಬೆಸ್ಟ್ ಬಿಪೋರ್' ಎನ್ನುವ ಬಗ್ಗೆ ನಿಯಮ ರೂಪಿಸಲು ಕೇಂದ್ರ ಆಹಾರ ಮತ್ತು ಪಡಿತರ ಖಾತೆಯು ಮುಂದಾಗಿರುವ ಬಗ‌ೆ ವರದಿಯಾಗಿತ್ತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು, ಬಹುಪಾಲು ಭಾರತೀಯರಿಗೆ 'ಎಕ್ಸ್ ಪೈರಿ ಡೇಟ್' ಅಥವಾ 'ಬೆಸ್ಟ್ ಬಿಪೋರ್' ಅಂದರೇನು ಎನ್ನುವುದೇ ತಿಳಿಯದ ಅಂಶವಾಗಿದೆ.

ಔಷಧಿ ಮತ್ತು ಆಹಾರ ಪದಾರ್ಥದಂತೆಯೇ ಯಾವುದಾದರೂ ವಸ್ತು ಕೊಂಡಾಗ ವಸ್ತುವಿನ ಜೊತೆಗೆ ನೀಡುವ ಬಳಕೆಯ ಸಹಾಯಕ ಮಾಹಿತಿ,  ಸಹಾಯವಾಣಿಗಳು, ಜಾಹೀರಾತುಗಳು ಜನರ ಭಾಷೆಯಲ್ಲಿ ಇರಬೇಕೆನ್ನುವ ಗಟ್ಟಿಯಾದ ನಿಯಮವಿಲ್ಲದಿರುವುದು ಕಂಪನಿಗಳು ಇಂಗ್ಲೀಶ್/ಹಿಂದಿಯಲ್ಲಿ ಮಾಹಿತಿ ನೀಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬರಲು ದಾರಿಮಾಡಿಕೊಟ್ಟಿದೆ

ಇನ್ನು ಉದ್ಯಮದ ವಿಷಯವಾಗಿ, ಕರ್ನಾಟಕ ರಾಜ್ಯವನ್ನೇ ಉದಾಹರಣೆಯಾಗಿ  ತೆಗೆದುಕೊಂಡರೆ, ಕರ್ನಾಟಕದಲ್ಲಿ ಔಷಧಿ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಅನೇಕ ಉದ್ಯಮಗಳಿಗೆ ಪ್ರತಿ ವರ್ಷ ಸಾವಿರಾರು ಕೋಟಿ ಲಾಭ ಮಾಡುವಷ್ಟು ದೊಡ್ಡದಾದ ಮಾರುಕಟ್ಟೆ ಇದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಜನರ ಭಾಷೆಯಾದ ಕನ್ನಡದಲ್ಲಿ ಮಾಹಿತಿ ನೀಡುವುದು ಕಂಪನಿಗಳಿಗೆ ಕಷ್ಟವಾದ ಕೆಲಸವೇನಲ್ಲ. ಕಾನೂನು ಗಟ್ಟಿಯಾಗಿ ಇಲ್ಲದಿರುವುದರಿಂದ ಅದರ ಲಾಭ ಪಡೆದು ಅನೇಕ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಕಾಣಿಸುತ್ತಿದೆ.

ತಂತ್ರಜ್ಞಾನ ಮುಂದುವರೆದಿದೆ, ಹಿಂದಿ/ಇಂಗ್ಲೀಶ್ ನಷ್ಟೇ ಸುಲಭವಾಗಿ ಇತರೇ ಭಾರತೀಯ ಭಾಷೆಯನ್ನು ಸುಲಭವಾಗಿ ಬಳಸಬಹುದಾದ ಸಲಕರಣೆಗಳು ಅಭಿವೃದ್ದಿ ಹೊಂದಿವೆ, ಈ ಸಮಯದಲ್ಲಿ ಸರಕಾರವು ಎಚ್ಚೆತ್ತು ಗ್ರಾಹಕ ಹಕ್ಕುಗಳ ಕಾಯಿದೆಯಲ್ಲಿ ಜನರ ಭಾಷೆಯನ್ನು ಗಣನೆಗೆ ತೆಗೆದುಕೊಂಡು, ಕಾಯಿದೆಗಳನ್ನು ಸರಿಯಾದ ರೀತಿಯಲ್ಲಿ ಬದಲಿಸಿ ಭಾರತದ ಒಕ್ಕೂಟದ ಎಲ್ಲಾ ಭಾಷಿಕ ಜನರ ಗ್ರಾಹಕ ಹಕ್ಕುಗಳನ್ನು ಎತ್ತಿಹಿಡಿಯುವಂತೆ ಮಾಡಲಿ. ಹಾಗೆಯೇ ಜನ ಸಾಮಾನ್ಯರೂ ತಮ್ಮ ಭಾಷೆಯಲ್ಲಿ ಸೇವೆ ಪಡೆಯುವುದು ತಮ್ಮ ಹಕ್ಕು ಎನ್ನುವುದನ್ನ ಮನಗಂಡು ಮಾರುಕಟ್ಟೆಯಲ್ಲಿ ತಮ್ಮ ಭಾಷೆಯನ್ನು ಬಳಸಲಿ

ಗುರುವಾರ, ಫೆಬ್ರವರಿ 18, 2016

ವಿಮಾನದಲ್ಲಿ ಹಿಂದಿ/ ಇಂಗ್ಲೀಶ್ ಮಾತ್ರ ಯಾಕೆ

ಮುಂಬೈನಿಂದ-ಅಹಮದಾಬಾದ್
ತಿರುವನಂತಪುರ- ಚೆನೈ
ಬೆಂಗಳೂರು-ಹೈದರಬಾದ್ ಹೀಗೆ   ಭಾರತ ದೇಶದ ಒಳಗೆ ವಿಮಾನದಲ್ಲಿ ಓಡಾಡಿದವರಿಗೆ ಒಂದು ವಿಷಯ ಗಮನಕ್ಕೆ ಬಂದಿರುತ್ತದೆ. ವಿಮಾನವು  ಭಾರತದೊಳಗಿನ ಯಾವುದೇ ಊರಿನಿಂದ ಹೊರಡಲಿ/ ತಲುಪಲಿ,  ಹೊರಡುವ/ ತಲುಪುವ ಊರಿನ ಭಾಷೆ ಯಾವುದೇ ಇರಲಿ ವಿಮಾನದೊಳಗಿನ ಸುರಕ್ಷತೆ ಮತ್ತು ಇನ್ನಿತರ ಮಾಹಿತಿಗಳನ್ನು ಹಿಂದಿ/ಇಂಗ್ಲೀಶ್ ಭಾಷೆಯಲ್ಲಿ ನೀಡಲಾಗುತ್ತದೆ. ಹಿಂದಿಯೊಂದೇ ಈ ದೇಶದ ಭಾಷೆ ಎನ್ನುವ ಭ್ರಮೆಯಲ್ಲಿರುವ ಭಾರತದ ಕೇಂದ್ರ ಸರಕಾರದ ವಿಮಾನಯಾನ ಸಚಿವಾಲಯವೂ ವಿಮಾನಗಳಲ್ಲಿನ ಈ ಹುಳುಕು ಭಾಷಾ ನೀತಿಗೆ ಒಪ್ಪಿಗೆ ನೀಡಿದೆ.

ಜನಗಣತಿಯ ಆಧಾರದ ಮೇಲೆ ನೋಡಿದರೆ ಭಾರತದಲ್ಲಿ ಹಿಂದಿ ಮಾತೃಭಾಷೆಯನ್ನಾಗಿ ಹೊಂದಿರುವ ಜನರ ಸಂಖ್ಯೆ ಸುಮಾರು 25% ನಷ್ಟಿದೆ ಮತ್ತು ಇಂಗ್ಲೀಶದ ತಿಳಿದಿರುವವರ ಸಂಖ್ಯೆ ಸುಮಾರು 7% ಇದೆ. ವಿಮಾನಯಾನ ಸಚಿವಾಲಯದ ಒಪ್ಪಿಗೆ ಮೇರೆಗೆ ಬಳಸಲಾಗುತ್ತಿರುವ ಭಾಷಾ ನೀತಿಯು ಹಿಂದಿ/ಇಂಗ್ಲೀಶ್ ಗೊತ್ತಿಲ್ಲದ ಜನರಿಗೆ ತಮ್ಮ ಜೀವಕ್ಕೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿದೆ. 

ಸಾವಿರಾರು ಕೋಟಿ ವ್ಯವಹಾರ ನಡೆಸುವ ವಿಮಾನಯಾನ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಬಳಕೆಯಲ್ಲಿರುವಂತೆ ವಿಮಾನ ಹೊರಡುವ ಮತ್ತು ತಲುಪುವ ಊರಿನ ಭಾಷೆಯನ್ನು ಬಳಕೆ ಮಾಡುವುದೇನು ದೊಡ್ಡ ವಿಷಯವಲ್ಲ. 

ವಿಮಾನಯಾನ ಸಚಿವಾಲಯು ಈ ಬಗ್ಗೆ ಗಮನಹರಿಸಿ, ಹೊರಡುವ/ ತಲುಪುವ ಊರಿನ ಭಾಷೆಯನ್ನು ಒಳಗೊಂಡಂತೆ ಭಾಷಾ ನೀತಿ  ರೂಪಿಸಬೇಕೆಂದು ಎಲ್ಲಾ ವಿಮಾನಯನ ಕಂಪನಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸೋಣ

 https://www.change.org/p/sri-ashok-gajapatiraju-minister-of-civil-aviation-government-of-india-demand-to-mandate-in-flight-announcements-in-indian-languages

ಚಿತ್ರ-mapsofworld

ಶನಿವಾರ, ಜುಲೈ 27, 2013

ಕರ್ನಾಟಕದಲ್ಲಿ ಬ್ಯಾಂಕುಗಳು ಕನ್ನಡದಲ್ಲಿ ಸೇವೆ ನೀಡುವುದು ನಿಯಮ

ನಾವುಗಳು ಬ್ಯಾಂಕುಗಳಿಗೆ ಹೋದಾಗ ದುಡ್ಡು ತೆಗೆಯಲು/ತುಂಬಲು ಚಲನ್ ಬರೆದುಕೊಡಿ ಎಂದು ಸಹಾಯ ಕೇಳುವ ಪ್ರಸಂಗಗಳನ್ನು ಗಮನಿಸಬಹುದು. ಇದೇ ಪ್ರಸಂಗ ಏಟಿಎಂಗಳಲ್ಲೂ  ಸಾಮಾನ್ಯವಾಗಿದೆ. ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವ ನಿಯಮವಿದ್ದರೂ  ಈ ನಿಯಮಗಳ ಅರಿವಿಲ್ಲದೆ ವಿದ್ಯಾವಂತರಾಗಿದ್ದರೂ‌ ಸಹ ಅವಿದ್ಯಾವಂತರಾಗುವ ಹಾಗೆ ಆಗಿದೆ. ಬ್ಯಾಂಕುಗಳು ಜನರ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವಂತೆ ರೂಪಿಸಿರುವ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆ ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ
(RBI) ನಿಯಮಗಳಿಗೆ ಒಳಪಟ್ಟಿರುತ್ತವೆ. RBI.ಬ್ಯಾಂಕಿನ ವಹಿವಾಟುಗಳು ಸರಿಯಾಗಿ ಮತ್ತು
ಸುಗಮವಾಗಿ ನಡೆಯಲೆಂದು ಮತ್ತು ಗ್ರಾಹಕರ ಹಿತ ಕಾಯಲೆಂದು ಹಲವು ನಿಯಮಗಳನ್ನು ರೂಪಿಸಿದೆ.ಈ ನಿಯಮಗಳಿಗೆ ಎಲ್ಲಾ ಖಾಸಗೀ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಬದ್ದವಾಗಿರಬೇಕು. RBI ನಿಯಮ ರೂಪಿಸುವುದರ ಜೊತೆಗೆ ಬ್ಯಾಂಕುಗಳು ನಿಯಮಗಳಿಗೆ ಬದ್ದವಾಗಿ ನಡೆದುಕೊಳ್ಳುತ್ತಿವೆಯೆ
ಎನ್ನುವುದಕ್ಕೆ ಕಣ್ಗಾವಲು ಇಟ್ಟಿರುತ್ತದೆ.

RBIನ ಮಾಸ್ಟರ್ ಸರ್ಕ್ಯುಲೇಶನ್ ಆನ್ ಕಸ್ಟಮರ್ ಸರ್ವಿಸ್ ಇನ್ ಬ್ಯಾಂಕ್ಸ್ (Master
Circular on Customer Service in
Banks<http://www.rbi.org.in/scripts/BS_ViewMasterCirculars.aspx?Id=7363&Mode=0>)
ಎನ್ನುವ ನಿಯಮಾವಳಿಯು ಗ್ರಾಹಕರ ಹಿತ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ
ನಿಯಮಾವಳಿಯಲ್ಲಿ ಗ್ರಾಹಕರ ಪ್ರತಿನಿತ್ಯದ ವಹಿವಾಟುಗಳಲ್ಲಿ ಉಪಯೋಗವಾಗುವಂತಹಾ ಹಲವು ಅಂಶಗಳಿವೆ.ಇದರಲ್ಲಿ ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹಸಬೇಕು ಎನ್ನುವಂತಹಾ ಪ್ರಮುಖವಾದ ಅಂಶಗಳಿವೆ. ಈ ನಿಯಮದಲ್ಲಿ ಹೇಳಿರುವಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಪಯೋಗವಾಗಲು ಚಲನ್ ಗಳು, ಖಾತೆ ತೆರೆಯುವ/ ಮುಚ್ಚುವ ಅರ್ಜಿಗಳು ಸೇರಿದಂತೆ ಇನ್ನಿತರೇ ಎಲ್ಲಾ ರೀತಿಯ ಮುದ್ರಿತ ಅರ್ಜಿಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸಬೇಕು ಜೊತೆಗೆ ಚೆಕ್ ಗಳು ಮತ್ತು ಚಲನ್ ಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಬರೆಯುವ ಅವಕಾಶ ಗ್ರಾಹಕರ ಹಕ್ಕಾಗಿದೆ, ಒಟ್ಟಾರೆ ಎಲ್ಲಾ ರೀತಿಯ ಗ್ರಾಹಕ ಸೇವೆಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸುವುದು ಪ್ರತಿಯೊಂದು ಬ್ಯಾಂಕಿನ ಕರ್ತವ್ಯವಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡುವುದು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋಂದು ಬ್ಯಾಂಕಿನ ಕರ್ತವ್ಯವಾಗಿದೆ.

ಮೇಲೆ ಹೇಳಿದೆ RBI ನ ನಿಯಮಾನುಸಾರ ಜನರು ಯಾವುದೇ ಅಡೆತಡೆಯಿಲ್ಲದೇ ಕರ್ನಾಟಕದಲ್ಲಿ
ಕನ್ನಡದಲ್ಲೇ ಬ್ಯಾಂಕಿನೊಂದಿಗೆ ವ್ಯವಹರಿಸಬಹುದು. ಕರ್ನಾಟಕದಲ್ಲಿ ಯಾವುದಾರರೂ
ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸದಿದ್ದರೆ ಅಥವಾ ಕನ್ನಡದಲ್ಲಿ
ಗ್ರಾಹಕ ಸೇವೆ ನೀಡದಿದ್ದರೆ ಅದು RBi ನಿಯಮದ ಉಲ್ಲಂಘನೆಯಾಗುವುದು, ಈ ಬಗ್ಗೆ ಆಯಾ ಬ್ಯಾಂಕಿನ ಮೇಲಿನ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ನಿಯಮ ಉಲ್ಲಂಘನೆಯ ಬಗ್ಗೆ RBI ನ ಗಮನಕ್ಕೇ ಕೂಡ ತರಬಹುದಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಮಾತನಾಡಿದ್ದು, ಬ್ಯಾಂಕುಗಳ ಸಮಿತಿ ಸಭೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ

ಗುರುವಾರ, ಜುಲೈ 11, 2013

ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನ ಕೊನೆಗೊಳ್ಳಲಿ

ಸಾರ್ವಜನಿಕರ ಹೆಚ್ಚು ಸಂಪರ್ಕವಿರುವ ಇಲಾಖೆಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ನಾಗರೀಕರು ಹಳ್ಳಿಯಲ್ಲೇ ಇರಲಿ ನಗರಗಳಲ್ಲೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಈ ಇಲಾಖೆಯ ಸೇವೆಯನ್ನು ಪಡೆದಿರುತ್ತಾರೆ.
ಅಂಚೆ ಇಲಾಖೆಯು ಕರ್ನಾಟಕದಾದ್ಯಂತ ವ್ಯಾಪಿಸಿರುವುದರಿಂದ ಕರ್ನಾಟಕದ ಜನರ ಭಾಷೆಯಾದ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದು ಸೇವೆಯನ್ನು ಪಡೆಯುವ ನಾಗರೀಕರಿಗೆ ಇಲಾಖೆಯೊಂದಿಗಿನ ವ್ಯವಹಾರ ಸುಲಭವಾಗಿಸುತ್ತದೆ

ಆದರೆ ಇತರೇ ಕೇಂದ್ರ ಸರಕಾರಗಳ ಮನಸ್ಥಿತಿಯೇ ಅಂಚೆ ಇಲಾಖೆಯಲ್ಲೂ ಪ್ರತಿಧ್ವನಿಸುತ್ತಿದೆ. ಇತರೇ ಕೇಂದ್ರ ಸರಕಾರದ ಇಲಾಖೆಯಂತೆಯೇ ಕರ್ನಾಟಕದಲ್ಲಿ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದರ ಬಗ್ಗೆ ಅಂಚೆ ಇಲಾಖೆಯೂ ಸಹ ಬಹಳ ಹಗುರವಾದ ಭಾವನೆಯನ್ನು ಹೊಂದಿರುವಂತಿದೆ. ಕನ್ನಡದೆಡೆಗಿನ ಹಗುರ ಭಾವನೆಯು ಕರ್ನಾಟಕದ ಕೊಟ್ಯಾಂತರ ಕನ್ನಡಿಗರು ತೊಂದರೆಗೆ ಗುರಿಯಾಗುವಂತೆ ಮಾಡಿದೆ. ಕೇಂದ್ರ ಸರಕಾರದ ಹುಳುಕು ಭಾಷಾನೀತಿಯು ಕೇಂದ್ರ ಸರಕಾರದ ಇಲಾಖೆಗಳ ಕನ್ನಡ ವಿರೊಧಿ ನಿಲುವಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು

ಅಂಚೆ ಇಲಾಖೆಯಲ್ಲಿ ದೊರೆಯುವ ಪಾರಂಗಳು ಸೇರಿದಂತೆ ಇತರೇ ಸೇವೆಗಳಲ್ಲಿ ಕನ್ನಡ ಇಲ್ಲದ ಬಗ್ಗೆ ಕನ್ನಡ ಗ್ರಾಹಕ ಕೂಟದ ಗೆಳೆಯರು ಅನೇಕ ದೂರುಗಳನ್ನು ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲದಿರುವುದು ದುರಂತವೇ ಸರಿ.

ಅಂಚೆ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅನೇಕ ರೀತಿಯ ದೂರುಗಳ ಅನ್ವಯ ಅಂಚೆ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಹೋದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರತಿನಿಧಿಗಳ ಜೊತೆಗೆ ಅಂಚೆ ಇಲಾಖೆಯ ಅಧಿಕಾರಿಯು ಉದ್ದಟತನ ತೊರಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರದ ಇಲಾಖೆಗಳು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಹೊಂದಿರುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಇಲಾಖೆಗಳು ಕನ್ನಡದಲ್ಲಿ ಸೇವೆ ನೀಡುವ ಮತ್ತು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರ ಭಾವನೆ ಹೊಂದಿರುವ ಮನಸ್ಥಿತಿಯ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನವನ್ನು  ಕೊನೆಗಾಣಿಸಲಿ.

ಗುರುವಾರ, ಜೂನ್ 27, 2013

2 ಚಕ್ರದ ಗಾಡಿಗಳ ಮಾರುಕಟ್ಟೆಯಲ್ಲಿ ಕನ್ನಡ ಗ್ರಾಹಕ

ಭಾರತ ಎರಡು ಚಕ್ರ ವಾಹನ (2 wheeler)ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಪಂಚದಲ್ಲೇ 2 ಸ್ಥಾನ ಪಡೆದುಕೊಂಡಿದೆ.. ಇತ್ತೀಚಿನ ವರದಿಗಳಂತೆ ಹೀರೊ, ಹೊಂಡಾ , ಬಜಾಜ್ ಮತ್ತು ಟಿವಿಎಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಮುಂದಿವೆ..ಇದೀಗ ಹೊರದೇಶದ ಕಂಪನಿಗಳು ಭಾರತದಲ್ಲಿ ವಾಹನ ಮಾರಾಟಕ್ಕೆ ಕೈಹಾಕಿದ್ದು ಹಾರ್ಲೆ ಡೇವಿಡ್ಸನ್ ನಂತಹಾ ಹತ್ತಾರು ಲಕ್ಷ ರೂಪಾಯಿ ಬೆಲೆ ಬಾಳುವ ಗಾಡಿಗಳು ಭಾರತದಲ್ಲಿ ಮಾರಾಟವಾಗುತ್ತಿವೆ.

ಆದರೆ ಈ ಮಾರುಕಟ್ಟೆಯಲ್ಲಿ ಒಬ್ಬ ಗ್ರಾಹಕನ ಭಾಷಾ ಹಕ್ಕುಗಳನ್ನು ಎಷ್ಟರ ಮಟ್ಟಿಗೆ ಗೌರವಿಸಲಾಗುತ್ತಿದೆ ಎಂದು ನೊಡಿದರೆ ನಮಗೆ ಕಾಣುವುದು ಒಂದು ದೊಡ್ಡ ಸೊನ್ನೆಯಷ್ಟೆ! ಬುಕ್ಕಿಂಗ್ ನಿಂದ ಹಿಡಿದು, ಸಾಲಕ್ಕೆ ಸಂಬಂಧಿಸಿದ ವಿಷಯಗಳು, ಗಾಡಿ ಕೊಂಡಿದ್ದಕ್ಕೆ ಕೊಡುವ ರಶೀತಿ, ಹೇಗೆ ಬಳಸಬೇಕೆಂದು ನೀಡುವ ಮ್ಯಾನುಯಲ್ ,ಗ್ಯಾರಂಟಿ, ವಾರಂಟಿ ಸೇರಿದಂತೆ ಅನೇಕ ವಿಷಯಗಳಲ್ಲಿ ಕನ್ನಡವನ್ನು ಕೈಬಿಟ್ಟಿರುವುದು ಕಾಣುತ್ತಿದೆ.

ಈ ಬಗ್ಗೆ ಕಂಪನಿಗಳನ್ನು ಕೇಳಿದರೆ ಭಾರತದಲ್ಲಿ ಅಷ್ಟು ಭಾಷೆಗಳಿವೆ ಇಷ್ಟು ಭಾಷೆಗಳಿವೆ ಎನ್ನುವ ಉತ್ತರ ಬರುತ್ತಾದರೂ, ಕರ್ನಾಟಕದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಕನ್ನಡ  ಭಾಷೆಯಲ್ಲಿ ಎಲ್ಲಾ ಸೇವೆ ಪಡೆಯುವ ಹಕ್ಕಿದೆ ಎನ್ನುವ ಮಾತು ಕೇಳಿಬರುವುದಿಲ್ಲ. ಇದರ ಜೊತೆಗೆ ಕರ್ನಾಟಕದಲ್ಲಿರುವ ಮಾರುಕಟ್ಟೆಯೂ ಪ್ರತಿ ತಿಂಗಳೂ ನೂರಾರು ಕೋಟಿ ಲಾಭಕೊಡುವಂತಿದ್ದರೂ ಕನ್ನಡದ ಗ್ರಾಹಕರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ

ಕರ್ನಾಟಕದಲ್ಲಿ 2 ವೀಲರ್ ಗಾಡಿಗಳ ಮಾರುಕಟ್ಟೆ ಎಷ್ಟಿದೆ? ಕನ್ನಡದಲ್ಲಿ ಸೇವೆ ನೀಡಲು ಆಗದಿರುವಸ್ಟು ಚಿಕ್ಕದೇ ನಮ್ಮ ರಾಜ್ಯದ ಮಾರುಕಟ್ಟೆ? ಎನ್ನುವುದನ್ನು ಇತ್ತೀಚಿನ ಮಾಹಿತಿಗಳ ಆಧಾರದಲ್ಲಿ ಒಮ್ಮೆ ನೊಡಿ, ನಮ್ಮ ರಾಜ್ಯದ ಮಾರುಕಟ್ಟೆಯ ಬಗ್ಗೆ ತಿಳಿಯೊಣ...

ಭಾರತದಲ್ಲಿ ತಿಂಗಳಿಗೆ ಮಾರಾಟವಾಗುವ 2 ಚಕ್ರ ಗಾಡಿಗಳ ಸಂಖ್ಯೆ ಸುಮಾರು 12 ಲಕ್ಷ, ಒಂದು 2 ಚಕ್ರದ ಗಾಡಿ ಬೆಲೆ ಆವೆರೇಜ್ 50000 ( 50 ಸಾವಿರ ಕಡಿಮೆನೇ, ಗಾಡಿಗಳ ಬೆಲೆ ಈಗ 1 ಲಕ್ಷದ ಆಸುಪಾಸಿನಲ್ಲಿದೆ)ಅಂತ ಇಟ್ಟುಕೊಂಡ್ರೆ, ಸುಮಾರು 6000 ಕೊಟಿ ರೂಪಾಯಿಯಷ್ಟು ಹೊಸ ಗಾಡಿಗಳು ಮಾರಾಟವಾಗುತ್ತೆ! ಇನ್ನು ಸ್ಪೇರ್ಸ & ಸರ್ವಿಸ್ ನಲ್ಲಿ ಸುಮಾರು 2000 ಕೋಟಿ ಅಂದುಕೊಂಡ್ರು ಒಟ್ಟಾರೆ ಕಡಿಮೆ ಅಂದ್ರು ತಿಂಗಳಿಗೆ 8000 ಕೋಟಿ ವಹಿವಾಟು ನಡೆಯುತ್ತೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದ್ರೆ ಈ 8000 ಕೋಟಿಯಲ್ಲಿ, ಕರ್ನಾಟಕದ ಜನ ಸಂಖ್ಯೆ ಮತ್ತು ಕೊಳ್ಳುವ ಸಾಮರ್ಥ್ಯದ ಆಧಾರದಲ್ಲಿ, ಕರ್ನಾಟಕದ್ದು ಕಡಿಮೆ ಅಂದ್ರು 5-8% ಪಾಲಿರಬಹುದು. ಕಡಿಮೆ ಅಂದ್ರು ಸುಮಾರು 500 ಕೋಟಿ ರೂಗಳಷ್ಟು ವ್ಯಾಪಾರ ಕನ್ನಡಿಗರಿಂದಲೇ  ಆಗುತ್ತೆ.ಹೆಚ್ಚು ಲಾಭ ಕೊಡುವ ಉದ್ದಿಮೆಗಳಲ್ಲಿ ವಾಹನ ತಯಾರಿಕೆಯೊ ಒಂದು ಎನ್ನಲಾಗುತ್ತೆ. ಅಂದ್ರೆ ಕರ್ನಾಟಕದಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದೆ.

ಮಾಹಿತಿಗಳ ಆಧಾರ- http://timesofindia.indiatimes.com/business/india-business/Honda-targeting-second-spot-in-Indian-two-wheeler-market/articleshow/20779991.cms

ಕನ್ನಡಿಗರಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದ್ದರೂ ಎಷ್ಟು ಕಂಪನಿಗಳು Manual book ಸೇರಿದಂತೆ ಇನ್ನಿತರೇ , ಗಾಡಿಗೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ಉಪಯೊಗವಾಗಲಿ ಎಂದು ಕನ್ನಡದಲ್ಲಿ ತಿಳಿಸುತ್ತಿವೆ? ಪ್ರತಿ ತಿಂಗಳು  ಕೋಟಿ ಕೋಟಿ ಲಾಭ ಬೇಕು. ಆದ್ರೆ ಕರ್ನಾಟಕದ ಗ್ರಾಹಕರ ಹಕ್ಕುಗಳಿಗೆ ಬೆಲೆ ಇಲ್ಲ ಅನ್ನೊ ನಡೆ ಎಷ್ಟು ಸರಿ?

ಗ್ರಾಹಕ ಹಕ್ಕೊತ್ತಾಯವೊಂದೇ ಮದ್ದು...
ಗ್ರಾಹಕ ಹಕ್ಕುಗಳಲ್ಲಿ ತಾನು ಕೊಂಡ ವಸ್ತುವಿನ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕನಿಗಿದೆ(Right to be informed)ಈ ಹಕ್ಕಿನ ಆಧಾರದಲ್ಲಿ ನೀವು ಗಾಡಿ ತಗೊಂಡಾಗ Manual book ಕನ್ನಡದಲ್ಲಿ ಕೊಟ್ಟಿದ್ದಾರೆಯೇ ಎಂದು ನೊಡಿ? ಇಲ್ಲ ಅಂದ್ರೆ , ನಿಮಗೆ ವ್ಯಾಪಾರ ಮಾತ್ರಬೇಕಾ? ನಮ್ಮ ಹಕ್ಕು ಗಳಿಗೆ ಬೆಲೆ ಇಲ್ವ ಅನ್ನೊ ಪ್ರಶ್ನೆ ಕೇಳಿ manual book ಕನ್ನಡದಲ್ಲಿ ಕೊಡಲು ತಿಳಿಸಿ

ಶನಿವಾರ, ಮೇ 4, 2013

ಪ್ರಾದೇಶಿಕ ಪಕ್ಷಕ್ಕಿರಲಿ ನಿಮ್ಮ ಮತ

ಪ್ರಾದೇಶಿಕ ಚಿಂತನೆಯು ಕರ್ನಾಟಕ ರಾಜ್ಯದಲ್ಲಿ ಇಲ್ಲದಿರುವುದರ ಪರಿಣಾಮವಾಗಿ ಹಲವಾರು ರೀತಿಯಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರು ಅನ್ಯಾಯಕ್ಕೆ ಒಳಗಾಗಿದ್ದೇವೆ..ರಾಷ್ಟ್ರೀಯ ಪಕ್ಷಗಳಿಗೆ ಕನ್ನಡ ಕನ್ನಡಿಗ ಕರ್ನಾಟಕ ಪ್ರತಿ ಬಾರಿಯೂ ಎರಡನೇಯ ಆದ್ಯತೆ ಪಡೆದುಕೊಳ್ಳುತ್ತಿರುವು ಹಲವಾರು ವಿಶಯಗಳ ಮೂಲಕ ಸಾಭೀತಾಗಿದೆ.

ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ದೊರಕ ಬೇಕಾದ ನ್ಯಾಯವನ್ನು ದೊರೆಕಿಸಿಕೊಡಬೇಕಿದೆ, ಕನ್ನಡ ಗ್ರಾಹಕರಿಗೆ ಅನುಕೂಲವಾಗುವಂತೆ ಗ್ರಾಹಕ ಹಕ್ಕು ಕಾಯಿದೆಗಳು ಬದಲಾಗಬೇಕಿದೆ ಮತ್ತು ಭಾರತದ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಮಾನ ದೊರೆಕಿಸುವುದರ ಜೊತೆಗೆ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಹಲವು ಬದಲಾವಣೆಗಳು ಆಗಬೇಕಿದೆ ಈ ಎಲ್ಲಾ ಬದಲಾವಣೆಗಳು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯವಿದೆ..ಬೇರೆ ಚುನಾವನೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಮ್ಮ ಮತ ದಾನದ ಹಕ್ಕಿನ ಮೂಲಕ ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷಗಳಿಗೆ ಮತ ನೀಡೊಣ..

ಮಂಗಳವಾರ, ಏಪ್ರಿಲ್ 23, 2013

ಕರ್ನಾಟಕ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಸ್ಥಿತಿಗತಿ

ಕರ್ನಾಟಕ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಶನಿವಾರ 23-2-2013 ರಂದು, ವಿಕಾಸ ಸೌಧದಲ್ಲಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದವರು ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರಕಾರದ ಇ-ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರಕಾರಕ್ಕೆ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವ NIC ಸಂಸ್ಥೆಯವರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ ನಾನೂ ಸಹ ಭಾಗವಹಿಸಿದ್ದೆನು, ಈ ಸಭೆಯಲ್ಲಿ ನಾನು ಅಧಿಕಾರಿಗಳಿಗೆ ನೀಡಿದ Presentation-