ಶನಿವಾರ, ಜುಲೈ 27, 2013

ಕರ್ನಾಟಕದಲ್ಲಿ ಬ್ಯಾಂಕುಗಳು ಕನ್ನಡದಲ್ಲಿ ಸೇವೆ ನೀಡುವುದು ನಿಯಮ

ನಾವುಗಳು ಬ್ಯಾಂಕುಗಳಿಗೆ ಹೋದಾಗ ದುಡ್ಡು ತೆಗೆಯಲು/ತುಂಬಲು ಚಲನ್ ಬರೆದುಕೊಡಿ ಎಂದು ಸಹಾಯ ಕೇಳುವ ಪ್ರಸಂಗಗಳನ್ನು ಗಮನಿಸಬಹುದು. ಇದೇ ಪ್ರಸಂಗ ಏಟಿಎಂಗಳಲ್ಲೂ  ಸಾಮಾನ್ಯವಾಗಿದೆ. ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವ ನಿಯಮವಿದ್ದರೂ  ಈ ನಿಯಮಗಳ ಅರಿವಿಲ್ಲದೆ ವಿದ್ಯಾವಂತರಾಗಿದ್ದರೂ‌ ಸಹ ಅವಿದ್ಯಾವಂತರಾಗುವ ಹಾಗೆ ಆಗಿದೆ. ಬ್ಯಾಂಕುಗಳು ಜನರ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವಂತೆ ರೂಪಿಸಿರುವ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆ ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ
(RBI) ನಿಯಮಗಳಿಗೆ ಒಳಪಟ್ಟಿರುತ್ತವೆ. RBI.ಬ್ಯಾಂಕಿನ ವಹಿವಾಟುಗಳು ಸರಿಯಾಗಿ ಮತ್ತು
ಸುಗಮವಾಗಿ ನಡೆಯಲೆಂದು ಮತ್ತು ಗ್ರಾಹಕರ ಹಿತ ಕಾಯಲೆಂದು ಹಲವು ನಿಯಮಗಳನ್ನು ರೂಪಿಸಿದೆ.ಈ ನಿಯಮಗಳಿಗೆ ಎಲ್ಲಾ ಖಾಸಗೀ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಬದ್ದವಾಗಿರಬೇಕು. RBI ನಿಯಮ ರೂಪಿಸುವುದರ ಜೊತೆಗೆ ಬ್ಯಾಂಕುಗಳು ನಿಯಮಗಳಿಗೆ ಬದ್ದವಾಗಿ ನಡೆದುಕೊಳ್ಳುತ್ತಿವೆಯೆ
ಎನ್ನುವುದಕ್ಕೆ ಕಣ್ಗಾವಲು ಇಟ್ಟಿರುತ್ತದೆ.

RBIನ ಮಾಸ್ಟರ್ ಸರ್ಕ್ಯುಲೇಶನ್ ಆನ್ ಕಸ್ಟಮರ್ ಸರ್ವಿಸ್ ಇನ್ ಬ್ಯಾಂಕ್ಸ್ (Master
Circular on Customer Service in
Banks<http://www.rbi.org.in/scripts/BS_ViewMasterCirculars.aspx?Id=7363&Mode=0>)
ಎನ್ನುವ ನಿಯಮಾವಳಿಯು ಗ್ರಾಹಕರ ಹಿತ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ
ನಿಯಮಾವಳಿಯಲ್ಲಿ ಗ್ರಾಹಕರ ಪ್ರತಿನಿತ್ಯದ ವಹಿವಾಟುಗಳಲ್ಲಿ ಉಪಯೋಗವಾಗುವಂತಹಾ ಹಲವು ಅಂಶಗಳಿವೆ.ಇದರಲ್ಲಿ ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹಸಬೇಕು ಎನ್ನುವಂತಹಾ ಪ್ರಮುಖವಾದ ಅಂಶಗಳಿವೆ. ಈ ನಿಯಮದಲ್ಲಿ ಹೇಳಿರುವಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಪಯೋಗವಾಗಲು ಚಲನ್ ಗಳು, ಖಾತೆ ತೆರೆಯುವ/ ಮುಚ್ಚುವ ಅರ್ಜಿಗಳು ಸೇರಿದಂತೆ ಇನ್ನಿತರೇ ಎಲ್ಲಾ ರೀತಿಯ ಮುದ್ರಿತ ಅರ್ಜಿಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸಬೇಕು ಜೊತೆಗೆ ಚೆಕ್ ಗಳು ಮತ್ತು ಚಲನ್ ಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಬರೆಯುವ ಅವಕಾಶ ಗ್ರಾಹಕರ ಹಕ್ಕಾಗಿದೆ, ಒಟ್ಟಾರೆ ಎಲ್ಲಾ ರೀತಿಯ ಗ್ರಾಹಕ ಸೇವೆಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸುವುದು ಪ್ರತಿಯೊಂದು ಬ್ಯಾಂಕಿನ ಕರ್ತವ್ಯವಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡುವುದು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋಂದು ಬ್ಯಾಂಕಿನ ಕರ್ತವ್ಯವಾಗಿದೆ.

ಮೇಲೆ ಹೇಳಿದೆ RBI ನ ನಿಯಮಾನುಸಾರ ಜನರು ಯಾವುದೇ ಅಡೆತಡೆಯಿಲ್ಲದೇ ಕರ್ನಾಟಕದಲ್ಲಿ
ಕನ್ನಡದಲ್ಲೇ ಬ್ಯಾಂಕಿನೊಂದಿಗೆ ವ್ಯವಹರಿಸಬಹುದು. ಕರ್ನಾಟಕದಲ್ಲಿ ಯಾವುದಾರರೂ
ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸದಿದ್ದರೆ ಅಥವಾ ಕನ್ನಡದಲ್ಲಿ
ಗ್ರಾಹಕ ಸೇವೆ ನೀಡದಿದ್ದರೆ ಅದು RBi ನಿಯಮದ ಉಲ್ಲಂಘನೆಯಾಗುವುದು, ಈ ಬಗ್ಗೆ ಆಯಾ ಬ್ಯಾಂಕಿನ ಮೇಲಿನ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ನಿಯಮ ಉಲ್ಲಂಘನೆಯ ಬಗ್ಗೆ RBI ನ ಗಮನಕ್ಕೇ ಕೂಡ ತರಬಹುದಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಮಾತನಾಡಿದ್ದು, ಬ್ಯಾಂಕುಗಳ ಸಮಿತಿ ಸಭೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ

ಗುರುವಾರ, ಜುಲೈ 11, 2013

ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನ ಕೊನೆಗೊಳ್ಳಲಿ

ಸಾರ್ವಜನಿಕರ ಹೆಚ್ಚು ಸಂಪರ್ಕವಿರುವ ಇಲಾಖೆಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ನಾಗರೀಕರು ಹಳ್ಳಿಯಲ್ಲೇ ಇರಲಿ ನಗರಗಳಲ್ಲೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಈ ಇಲಾಖೆಯ ಸೇವೆಯನ್ನು ಪಡೆದಿರುತ್ತಾರೆ.
ಅಂಚೆ ಇಲಾಖೆಯು ಕರ್ನಾಟಕದಾದ್ಯಂತ ವ್ಯಾಪಿಸಿರುವುದರಿಂದ ಕರ್ನಾಟಕದ ಜನರ ಭಾಷೆಯಾದ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದು ಸೇವೆಯನ್ನು ಪಡೆಯುವ ನಾಗರೀಕರಿಗೆ ಇಲಾಖೆಯೊಂದಿಗಿನ ವ್ಯವಹಾರ ಸುಲಭವಾಗಿಸುತ್ತದೆ

ಆದರೆ ಇತರೇ ಕೇಂದ್ರ ಸರಕಾರಗಳ ಮನಸ್ಥಿತಿಯೇ ಅಂಚೆ ಇಲಾಖೆಯಲ್ಲೂ ಪ್ರತಿಧ್ವನಿಸುತ್ತಿದೆ. ಇತರೇ ಕೇಂದ್ರ ಸರಕಾರದ ಇಲಾಖೆಯಂತೆಯೇ ಕರ್ನಾಟಕದಲ್ಲಿ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದರ ಬಗ್ಗೆ ಅಂಚೆ ಇಲಾಖೆಯೂ ಸಹ ಬಹಳ ಹಗುರವಾದ ಭಾವನೆಯನ್ನು ಹೊಂದಿರುವಂತಿದೆ. ಕನ್ನಡದೆಡೆಗಿನ ಹಗುರ ಭಾವನೆಯು ಕರ್ನಾಟಕದ ಕೊಟ್ಯಾಂತರ ಕನ್ನಡಿಗರು ತೊಂದರೆಗೆ ಗುರಿಯಾಗುವಂತೆ ಮಾಡಿದೆ. ಕೇಂದ್ರ ಸರಕಾರದ ಹುಳುಕು ಭಾಷಾನೀತಿಯು ಕೇಂದ್ರ ಸರಕಾರದ ಇಲಾಖೆಗಳ ಕನ್ನಡ ವಿರೊಧಿ ನಿಲುವಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು

ಅಂಚೆ ಇಲಾಖೆಯಲ್ಲಿ ದೊರೆಯುವ ಪಾರಂಗಳು ಸೇರಿದಂತೆ ಇತರೇ ಸೇವೆಗಳಲ್ಲಿ ಕನ್ನಡ ಇಲ್ಲದ ಬಗ್ಗೆ ಕನ್ನಡ ಗ್ರಾಹಕ ಕೂಟದ ಗೆಳೆಯರು ಅನೇಕ ದೂರುಗಳನ್ನು ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲದಿರುವುದು ದುರಂತವೇ ಸರಿ.

ಅಂಚೆ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅನೇಕ ರೀತಿಯ ದೂರುಗಳ ಅನ್ವಯ ಅಂಚೆ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಹೋದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರತಿನಿಧಿಗಳ ಜೊತೆಗೆ ಅಂಚೆ ಇಲಾಖೆಯ ಅಧಿಕಾರಿಯು ಉದ್ದಟತನ ತೊರಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರದ ಇಲಾಖೆಗಳು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಹೊಂದಿರುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಇಲಾಖೆಗಳು ಕನ್ನಡದಲ್ಲಿ ಸೇವೆ ನೀಡುವ ಮತ್ತು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರ ಭಾವನೆ ಹೊಂದಿರುವ ಮನಸ್ಥಿತಿಯ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನವನ್ನು  ಕೊನೆಗಾಣಿಸಲಿ.