ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

ಗುರುವಾರ, ಡಿಸೆಂಬರ್ 8, 2011

ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?


೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗ್ತಿದೆ. ಪ್ರತಿಸರಿಯಂತೆ ಈ ಸರಿಯೂ ಅನೇಕ ಗೋಶ್ಟಿಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟಗಳನ್ನ ಏರ್ಪಡಿಸಿದ್ದಾರೆ ಇದೆಲ್ಲವುದರ ಜೊತೆಗೆ ಇಲ್ಲಿ  ನಾಡಿನ ಸಾಹಿತ್ಯ ರಂಗದ  ದಿಗ್ಗಜರು ಬಂದು ಸೇರುತ್ತಾರೆ.

ನುಡಿಹಬ್ಬದ ಕುಶಿಯಲ್ಲಿ  ಬಾಗಿಯಾಗೋಕ್ಕೆ ನಾನು ಸಹ ಇಂದು ಗಂಗಾವತಿಗೆ ಹೋಗುವವನಿದ್ದೇನೆ. ಇದಕ್ಕೆಂದು ನಮ್ಮ ಕ.ರಾ.ರ.ಸಾ.ಸಂ ಯ ಬಸ್ಸಿನಲ್ಲಿ ಒಂದು ಟಿಕೆಟ್ ಅನ್ನು ಕಾಯ್ದಿರಿಸಿದ್ದೇನೆ.  ಆದರೆ ಈ ಟಿಕೆಟ್ ನೋಡಿದ ತಕ್ಯಣ ನನ್ನ ಮನಸ್ಸಿನಲ್ಲಿ ಬಂದಿದ್ದು " ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?" ಎಂಬುದು, ಹೀಗೆ ನನ್ನ ಮನಸ್ಸಿನಲ್ಲಿ ಬರೋಕ್ಕೆ ಕಾರಣವಿದೆ. ಅದೇನಂದ್ರೆ ತಂತ್ರಜ್ನಾನ ಇಶ್ಟು ಮುಂದುವರೆದರೂ ಸಹ ಇಂದಿಗೂ ನಮ್ಮ  ಕ.ರ.ಸಾ.ಸಂ ಯವರು ಕನ್ನಡದಲ್ಲಿ ಟಿಕೆಟ್ ಮುದ್ರಿಸಿಕೊಡದಿರೋದು.  ಕ.ರಾ.ರ.ಸಾ.ಸಂ ಯ ಸೀಟು ಕಾಯ್ದಿರಿಸುವ ಟಿಕೆಟ್ ನಲ್ಲಿ ಕಾಯ್ದಿರಿಸುವಿಕೆಗೆ ಸಂಬಂದಿಸಿದ ಎಲ್ಲಾ ಮಾಹಿತಿಗಳು ಇಂಗ್ಲೀಶ್ ನಲ್ಲಿ ಇವೆ. ಇಂಗ್ಲೀಶ್ ಸರಿಯಾಗಿ ಬಲ್ಲವರು ತಮಗೆ ನೀಡಿದ ಟಿಕೆಟ್ ಸರಿಯಿದೆಯೇ ಇಲ್ಲವೇ ಎನ್ನೊದನ್ನ ತಿಳಿಯೋಕ್ಕೆ ಸಾದ್ಯ, ಇಂಗ್ಲೀಶ್ ಗೊತ್ತಿಲ್ಲದವರ ಕತೆ ದೇವರೇ ಬಲ್ಲ. ಗಂಗಾವತಿಯ ನುಡಿಹಬ್ಬಕ್ಕೆ ಬರಬೇಕಾದವರು ಅಕಸ್ಮಾತ್ ತಪ್ಪಾಗಿ ಬೇರೆಯಾವುದೋ ಟಿಕೆಟ್ ಪಡೆದು, ಸರಿಯಿದೆಯೇ ಎಂದು ನೋಡೊಕ್ಕೆ ತಿಳಿಯದೇ ಇನ್ನೆಲ್ಲೋ ಹೋಗುವ ಪರಿಸ್ತಿತಿ ಬಂದ್ರೆ ಅದಕ್ಕೆ ಆಶ್ಚರ್ಯಪಡಬೇಕಾದ್ದಿಲ್ಲ.


ಸರಕಾರ ಪ್ರತಿವರ್ಶ ಕೋಟ್ಯಂತರ ರೂಪಾಯಿ ಕರ್ಚು ಮಾಡಿ ಸಾಹಿತ್ಯ ಸಮ್ಮೇಳನದ ಜೊತೆಗೆ ಹಲವಾರು ತರದ ಕನ್ನಡ ಹಬ್ಬಗಳನ್ನ ಆಚರಿಸುತ್ತದೆ. ಆದರೆ ಅದೇ ಸರಕಾರದ  ಕ.ರಾ.ರ.ಸಾ.ಸಂ ಸೇರಿದಂತೆ ಹಲವಾರು ಸಂಸ್ತೆಗಳು ಕನ್ನಡದಲ್ಲಿ ಆಡಳಿತವನ್ನ ನಡೆಸದೇ ತಮ್ಮ ಸೇವೆಗಳನ್ನ ಕನ್ನಡಿಗರಿಂದ ದೂರಕ್ಕೆ ಕೊಂಡೊಯ್ಯುತ್ತಿರುವುದು ವಿಪರ್ಯಾಸವೇ ಸರಿ!  ಕ.ರಾ.ರ.ಸಾ.ಸಂ ಯವರಿಗೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಳಕಳಿಯಿದ್ದಿದ್ದೇ ಆಗಿದ್ದಲ್ಲಿ ತಮ್ಮ ಗ್ರಾಹಕ ಸೇವೆಯಲ್ಲಿ ಬಳಕೆಯಾಗಿರುವ ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ಕನ್ನಡಿಗರಿಗೆ ತಮ್ಮ ಸೇವೆಯನ್ನ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಕ.ರಾ.ರ.ಸಾ.ಸಂ ವರ್ಶಕ್ಕೊಮ್ಮೆ ಒಬ್ಬ ಕನ್ನಡದ ಸಾದಕರಿಗೆ ನ್ರುಪತುಂಗ ಪ್ರಶಸ್ತಿ ನೀಡುವುದೇ ಕನ್ನಡ ಕೆಲಸವೆಂದು ತಿಳಿದಿದಿಯೇನೋ(?). ವರ್ಶಕ್ಕೊಮ್ಮೆ ಪ್ರಶಸ್ತಿ ನೀಡಿ ಪ್ರತಿದಿನ ಕನ್ನಡಿಗರಿಂದ ತನ್ನ ಸೇವೆಗಳನ್ನ ದೂರಕ್ಕೆ ಕೊಂಡೊಯ್ಯುತ್ತಿರೋದು ನೋಡಿದ್ರೆ ಆ ಪ್ರಶಸ್ತಿ ನೀಡೋದಕ್ಕೆ ಯಾವುದೇ ಅರ್ತ ಇರೋಲ್ಲ ಅನ್ನಿಸುತ್ತೆ.

ತಂತ್ರಜ್ನಾನ ಬಳಕೆಯಿಂದ ನಿಜಕ್ಕು ಕನ್ನಡದಲ್ಲಿ ಸೇವೆಯನ್ನ ಸುಲಬವಾಗಿ ನೀಡಬಹುದು ಇದರಿಂದ ಜನರಿಗೆ ತಮ್ಮ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾದ್ಯ ಅನ್ನೊದನ್ನ  ಕ.ರಾ.ರ.ಸಾ.ಸಂ ಯಂತಹ ಸರಕಾರಿ ಸಂಸ್ತೆಗಳು ತಿಳಿದುಕೊಳ್ಳೋದು ಯಾವಾಗ?

ಕೊನೆಯದಾಗಿ: “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಎಂಬ ವಿಶಯವಾಗಿ ನನ್ನ ಸ್ನೇಹಿತ ಚೇತನ್ ಇದೇ ನುಡಿಹಬ್ಬದಲ್ಲಿ “ಆಧುನಿಕ ಜಗತ್ತು ಮತ್ತು ಕನ್ನಡ”( ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ)  ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಇದರಲ್ಲಿ  ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಮಾತನಾಡಲಿದ್ದಾರೆ. ಇದೇ ವಿಚಾರ ಸಂಕಿರಣದಲ್ಲಿ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ.

ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?

ಶುಕ್ರವಾರ, ನವೆಂಬರ್ 4, 2011

ನಮ್ಮ ತ್ಯಾಗದಿಂದಲೇ ಅಲ್ಲವೇ ನಮ್ಮ ಮೆಟ್ರೋ ಓಡುತ್ತಿರುವುದು?

ನಮ್ಮ ಮೆಟ್ರೋನ ಬಗ್ಗೆ ನವಂಬರ್ 3 ರಂದು ಡೆಕನ್ ಹೆರಾರ್ಡ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ, ಈ ವರದಿಯ ಪ್ರಕಾರ, ನಮ್ಮ ಮೆಟ್ರೊ, ಬೆಂಗಳೂರು ನಗರ ಪಾಲಿಕೆಯ ಹಲವಾರು ಜಾಗಗಳನ್ನ ಬಿಟ್ಟಿಯಾಗಿ ವಶಪಡಿಸಿಕೊಂಡು ಅಲ್ಲಿ ಕಾಮಗಾರಿಯನ್ನ ನಡೆಸುತ್ತಿದೆ, ಪಾಲಿಕೆಯ ಸುಮಾರು 65 ರಿಂದ 70 ಸಾವಿರ ಅಡಿಗಳಶ್ಟು ಜಾಗ ಮತ್ತು ಅಲ್ಲಿ ಇರುವ ಕಟ್ಟಡ ನಮ್ಮ ಮೆಟ್ರೋ ಪಾಲಾಗಿದೆ. ಈ ಆಸ್ತಿ ನೂರಾರು ಕೋಟಿ ಬೆಲೆಬಾಳುತ್ತದೆ.

ಇವಿಶ್ಟೇ ಅಲ್ಲದೇ ನಮ್ಮ ಮೆಟ್ರೊಗೆಂದು ನಗರದ ಹಲವಾರು ಕಡೆಗಳಲ್ಲಿ ನಮ್ಮ ನಾಡಿನ ಜನರು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಹಣಕ್ಕೆ ತಮ್ಮ ಜಾಗವನ್ನ ಕೊಟ್ಟಿದ್ದಾರೆ, ಹಲವಾರು ಅಂಗಡಿ ಮುಂಗಟ್ಟುಗಳನ್ನ ನಮ್ಮ ಮೆಟ್ರೋಗೆಂದು ಮುಚ್ಚಿಸಲಾಗಿದೆ. ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೇಟ್ರೋ ಕಾಮಗಾರಿಯಿಂದ ಉಂಟಾಗಿರುವ ಟ್ರಾಪಿಕ್ ವೈಪರಿತ್ಯವನ್ನು ದಿನ ನಿತ್ಯ ನಮ್ಮ ಜನ ಅನುಬವಿಸುತ್ತಿದ್ದಾರೆ.. ಇಂತಹ ನಮ್ಮ ನಾಡಿನ ಜನರ ತ್ಯಾಗದಿಂದಲೇ ನಮ್ಮ ಮೆಟ್ರೊ ಬಿಡುಗಡೆಯಾಗಿ ಓಡಾಡಲು ಸಾದ್ಯವಾಗಿರುವುದು ಅಲ್ಲವೇ? ಆದರೆ ಇವ್ಯಾವು ಲೆಕ್ಕಕ್ಕೆ ಇಲ್ಲವೆಂಬಂತೆ ನಮ್ಮ ಮೆಟ್ರೊ ಬೆಂಗಳೂರಿಗರನ್ನ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ..

ನಮ್ಮ ನಾಡಿನ ಜನರ ತ್ಯಾಗವಿದ್ದರೂ ಸಹ ನಮ್ಮ ನಾಡಿನ ಬಾಶೆಗೆ ಮನ್ನಣೆ ಸಿಗಬೇಕು, ನಮ್ಮ ನಾಡಿನ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನ ಬೇಡಿಕೊಳ್ಳುವ ಪರಿಸ್ತಿತಿಯನ್ನ ನಮ್ಮ ಮೆಟ್ರೋ ನ ಅದಿಕಾರಿಗಳು ನಿರ್ಮಿಸಿದ್ದಾರೆ. ನಮ್ಮ ನಾಡಿನ ಜನರ ಬಾಶಾ ಮತ್ತು ಉದ್ಯೋಗದ ಕಳಕಳಿಗೆ, ಮೆಟ್ರೊ ಅದಿಕಾರಿಗಳು ಉದ್ದಟ ತನ ತೋರುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಪರರಾಜ್ಯದಿಂದ ಬಂದು ನಮ್ಮ ಮೆಟ್ರೊನಲ್ಲಿ ಕೆಲಸ ಮಾಡುತ್ತಿರುವರುಗಳು ನಮ್ಮ ನಾಡು ನುಡಿ ವಿರುದ್ದವಾಗಿ ಮಾತನಾಡಿ ನಮ್ಮ ಸ್ವಾಬಿಮಾನವನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡ ವಿರೋದಿ ಮೆಟ್ರೊ ಅದಿಕಾರಿಗಳು ಮತ್ತು ಪರರಾಜ್ಯದಿಂದ ಬಂದು ಕನ್ನಡ ವಿರೋದಿತನ ತೋರುತ್ತಿರುವ ಮೆಟ್ರೊ ಕೆಲಸಗಾರರಿಗೆ ದಿಕ್ಕಾರವಿರಲಿ... ನಮ್ಮ ನಾಡಿನ ಜನರ ತ್ಯಾಗಕ್ಕೆ ತಕ್ಕ ಮಾನ್ಯತೆ ಸಿಗಲಿ

ಭಾನುವಾರ, ಅಕ್ಟೋಬರ್ 16, 2011

ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡದ ಜ್ನಾನ ಅತ್ಯಂತ ಅವಶ್ಯಕವಾದುದು.

ಬೆಂಗಳೂರು ಮೆಟ್ರೋ ಕೆಲವೇ ದಿನಗಳಲ್ಲಿ ಪ್ರಾರಂಬವಾಗುತ್ತಿದೆ. CISF ಮೆಟ್ರೋ ಗೆ ರಕ್ಷಣೆ ನೀಡತ್ತಾರೆಂದು ಹೇಳಲಾಗುತ್ತಿದೆ. CISF ನವರು ರಕ್ಷಣೆ ನೀಡುತ್ತಾರೆಂಬುದು ನಿಜಕ್ಕು ಸಂತೋಶದ ವಿಶಯ CISF ನವರಿಗೆ ಉತ್ತಮ ರೀತಿಯ ತರಬೇತಿ ಕೊಡಲಾಗಿರುತ್ತದೆ ಮತ್ತು ಇದು ದುಶ್ಟ್ರ ಕ್ರುತ್ಯಗಳ ತಡೆಗೆ ತುಂಬಾನೆ ಅನುಕೂಲಕಾರಿಯಾಗಿರುತ್ತೆ.


ಆದರೆ CISF ನವರನ್ನ ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ನೋಡಿದ್ದೇವೆ ಅವರುಗಳಿಗೆ ಕನ್ನಡದ ಜ್ನಾನವೇ ಇರುವುದಿಲ್ಲ, ಅನೇಕರು ಹಲವಾರು ಬಾರಿ ವಿಮಾನ ನಿಲ್ದಾಣದಲ್ಲಿ ಇದರಿಂದ ತೊಂದರೆಗೊಳಗಿರುವುದೂ ಉಂಟು. ತುರ್ತು ಸಮಯದಲ್ಲಿ ಪರಿಸ್ತಿತಿಯನ್ನ ನಿಬಾಯಿಸಲು ಇತರೆ ಕಟಿಣ ತರಬೇತಿಗಳಂತೆ ಕನ್ನಡ ಬಾಶೆಯ ಜ್ನಾನವೂ ಅತ್ಯಂತ ಅವಶ್ಯಕವಲ್ಲವೇ?

ಬೆಂಗಳೂರಿನ ವಿಮಾನ ನಿಲ್ದಾಣವನ್ನ ಬಳಸುವವರ ಸಂಕ್ಯೆಗಿಂತ ಮೆಟ್ರೋ ಬಳಸುವ ಜನ ಸಾಮಾನ್ಯರ ಸಂಕ್ಯೆ ಹೆಚ್ಚಾಗಿಯೇ ಇರುತ್ತದೆ. ಮೆಟ್ರೋ ನಿಲ್ದಾಣದಲ್ಲಿ ಇರುವ CISF ನವರು ದುಶ್ಟ ಕ್ರುತ್ಯಗಳ ತಡೆಯುವುದರ ಜೊತೆಗೆ ಪ್ರಯಾಣಿಕರ ಸ್ನೇಹಿಯಾಗಿ ಅನೇಕ ಸಮಯಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಇವರಿಗೆ ಕನ್ನಡ ಬಾಶೆಯ ಜ್ನಾನ ಇರಲೇಬೇಕು. ಇದರಿಂದ ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡ ಬಾಶೆಯ ಕಲಿಕೆ ಅತ್ಯಂತ ಅವಶ್ಯಕವಾದುದು ಕೂಡ.

ಬೆಂಗಳೂರು ಮೆಟ್ರೋ ನವರು CISF ನವರನ್ನ ರಕ್ಷಣೆಗೆ ಕರೆಸಿಕೊಳ್ಳುವುದರ ಜೊತೆಗೆ ಎಲ್ಲಾ CISF ಸಿಬ್ಬಂದಿಗಳಿಗೆ ಕನ್ನಡದ ಜ್ನಾನಕ್ಕಾಗಿ ತರಬೇತಿ ನಡೆಸಿ ಆ ನಂತರ ಕೆಲಸದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕು, ಇದು ಬೆಂಗಳೂರು ಮೆಟ್ರೋ ನಿಗಮದ ಕರ್ತವ್ಯ ಕೂಡ

ಶುಕ್ರವಾರ, ಸೆಪ್ಟೆಂಬರ್ 30, 2011

ಮೈಸೂರು ದಸರ ನಾಡ ಹಬ್ಬನ?

ಮೈಸೂರು ದಸರಾ ೪೦೦ ಕ್ಕು ಹೆಚ್ಚು ಆಚರಣೆಗಳನ್ನ ಕಂಡಿದ್ದು ಕೆಲವು ವರ್ಶಗಳಿಂದ ಕರ್ನಾಟಕ ಸರಕಾರ ನಾಡ ಹಬ್ಬವನ್ನಾಗಿ ಆಚರಿಸುತ್ತಿದೆ. ದಸರಾ ಸಮಯದಲ್ಲಿ ವಿದೇಶೀ ಪ್ರವಾಸಿಗರೂ ಸೇರಿದಂತೆ ಲಕ್ಶಾಂತರ ಪ್ರವಾಸಿಗರು ಮೈಸೂರು ದಸರದಲ್ಲಿ ಬಾಗವಹಿಸುತ್ತಾರೆ. ದಸರಾದಲ್ಲಿ ನಮ್ಮ ಕಲೆ ಸಂಸ್ಕ್ರುತಿ ಬಾಶೆಯನ್ನ ಎತ್ತಿ ಹಿಡಿಯಲು ಸರಕಾರ ಕೋಟ್ಯಾಂತರ ಹಣ ಬಳಸುತ್ತೆ.


ಇತ್ತೀಚಿನ ದಿನಗಳಲ್ಲಿ ದಸರದಲ್ಲಿ ಯುವ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ,ಕುಸ್ತಿ, ಗ್ರಾಮೀಣ ದಸರಾ, ಆಹಾರ ಮೇಳ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಜನರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮಗಳನ್ನ ರೂಪಿಸಿದೆ. ಆದರೆ..........ಈ ಕಾರ್ಯಕ್ರಮಗಳಲ್ಲಿ ಆಗುತ್ತಿರೋದೇನು?????

ನಾಡ ಹಬ್ಬದಲ್ಲಿ ನಮ್ಮ ನಾಡಿನ ಬಾಶೆ ಕಲೆ ಸಂಸ್ಕ್ರುತಿಯನ್ನ ಎತ್ತಿ ಹಿಡಿಯೋ ಕೆಲ್ಸ ಆಗಬೇಕಿತ್ತು ಆದ್ರೆ ನಮ್ಮ ನಾಡಿನದ್ದಲ್ಲದ ಕಲೆ, ಬಾಶೆ, ಸಂಸ್ಕ್ರುತಿಯನ್ನ ಎತ್ತಿ ಕುಣಿಸುತ್ತಿದ್ದಾರೆ. ಯುವ ದಸರಾದಿಂದ ಹಿಡಿದು ಅನೇಕ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲಿಹೋದರಲ್ಲಿ ಸಿಗೋದು ಹೊರನಾಡಿನ ಕಲೆ ಸಂಸ್ಕ್ರುತಿಯ ಮೇಲುಗೈ !!!! ಇದು ಯಾಕೆ ಎಂದು ಕೇಳಿದ್ದಕ್ಕೆ ಪೇಸ್ ಬುಕ್ಕಿನಲ್ಲಿ ಇವರಿಂದ ಬಂದ ಉತ್ತರವನ್ನ ನೊಡಿ-

Mysore Dasara 2011 How come taste/likes of people appearing for these shows and also Music show at Palace are appears to be different from views/openions expressed here? If they haven't liked a show by a non-kannadiga, they would have stayed home! The programmes are not ad-hoc but they are published in advance...


ಮೈಸೂರು ದಸರ ನೊಡಲು ಬರುವ ಪ್ರವಾಸಿಗರು ನಮ್ಮ ನಾಡಿನ ಕಲೆ ಸಂಸ್ಕ್ರುತಿಯ ಪರಿಚಯ ಪಡೆಯಲು ಬರುತ್ತಾರಲ್ಲವೇ? ಈ ಪ್ರವಾಸಿಗರಿಗೆ ಸರಕಾರ ದಸರಾದ ಮೂಲಕ ಪರಿಚಯಿಸಲು ಹೊರಟಿರುವುದು ಯಾವ ಸಂಸ್ಕ್ರುತಿಯನ್ನ? ಯಾವ ಬಾಶೆಯನ್ನ? ಯಾವ ನಾಡಿನ ಕಲೆಗಳನ್ನ???ಇವರು ಮೇಲೆ ಹೇಳಿರೋದು ನಿಜವಾಗಿದ್ದಲ್ಲಿ ಸರಕಾರ ದಸರಾವನ್ನ ನಾಡ ಹಬ್ಬವಾಗಿ ಆಚರಿಸಿದ್ದರ ಅವಶ್ಯಕತೆಯೇನಿದೆ? ದಸರಾಕ್ಕೆ ಜನಿಫ಼ರ್ ಲೋಪೇಸ್ ಕರೆಸಿದ್ರೆ ಅತವಾ ಇನ್ಯಾರನ್ನೊ ಕರೆಸಿ ಕ್ಯಾಬರೆ ನಡೆಸಿದ್ರೆ ಅತವಾ ಕುಸ್ತಿ ಪಂದ್ಯಾವಳಿ ಬದಲಿಗೆ WWF championship ನಡೆಸಿದ್ರೆ ಅತವಾ ಜಂಬು ಸವಾರಿ ಜೊತೆಗಿನ ಸ್ತಬ್ದ ಚಿತ್ರಗಳ ಬದಲಿಗೆ ಮಾಡೆಲ್ ಗಳ ಕ್ಯಾಟ್ ವಾಕ್ ನಡೆಸಿದ್ರೆ ಇನ್ನು ಹೆಚ್ಚು ಜನ ಬರಬಹುದೇನೋ..... ಆದ್ರೆ ನಾಡಹಬ್ಬವನ್ನಾಗಿ ಆಚರಿಸೋ ಸರಕಾರಕ್ಕೆ ಯಾವ ಕಾರ್ಯಕ್ರಮ ನಡೆಸುವ ಮೂಲಕ ನಮ್ಮ ಸಂಸ್ಕ್ರುತಿ ಕಲೆ ಬಾಶೆಯನ್ನ ಎತ್ತಿಹಿಡಿಯಬೇಕು ಎನ್ನುವುದು ಗೊತ್ತಿರಬೇಕಲ್ವೇ?

ನಮ್ಮ ನಾಡಿಗೆ ಸಂಬಂದಪಡದ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಸರಕಾರ ಪ್ರವಾಸಿಗರಿಗೆ ಬೇರೆ ನಾಡಿನ ಕಲೆ, ಸಂಸ್ಕ್ರುತಿ ಮತ್ತು ಬಾಶೆಯನ್ನ ಪರಿಚಯಿಸಲು ಮತ್ತು ಅವಕ್ಕೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಸರಿಯೇ??? ಒಮ್ಮೆ ಯೋಚಿಸಿ...........

ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.