ಗುರುವಾರ, ಏಪ್ರಿಲ್ 28, 2011

ಬಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.

ತುಂಬ ದಿನದಿಂದ ವಂಡರ್ ಲಾ ಗೆ ಹೋಗ್ಬೇಕು ಅಂತ ಅಂದ್ಕೊಂಡಿದ್ದೆ ಅದು ನೆನ್ನೆ ನೆರವೇರ್ತು. ನಮ್ಮ ಮನೆಯವರು ಮತ್ತು ನನ್ನ ಸ್ನೇಹಿತರ ಮನೆಯವರು ಜೊತೆಗೆ ಹೋಗಿದ್ವಿ,


ಅಲ್ಲಿ ಸ್ಕೈ ವೀಲ್ ನಲ್ಲಿ ಹೋಗೋಕ್ಕೆ ಅಂತ ೧೩ ಅಂತಸ್ತಿನ ಮಹಡಿಗೆ ಲಿಫ಼್ಟ್ ನಲ್ಲಿ ಹೋದ್ವಿ. ಆಟವನ್ನ ಮುಗಿಸಿ ವಾಪಸ್ ಬರಲು ಮತ್ತೆ ಲಿಪ್ಟ್ ಬಳಿ ಬಂದಾಗ ನಾವು, ಮತ್ತೆ ನಮ್ ಜೊತೆ ಲಿಪ್ಟ್ ಗಾಗಿ ಕಾಯ್ತಿದ್ದ ಚಿಕ್ಕ ಮಕ್ಕಳ ಗುಂಪೊಂದಿತ್ತು. ಅಲ್ಲೊಬ್ಬ ಸೆಕ್ಯುರಿಟಿ ನವನು ನಿಂತಿದ್ದ, ಲಿಪ್ಟ್ ಎಶ್ಟು ಹೊತ್ತಾದ ಮೇಲೂ ಕೆಳಗಿನಿಂದ ೧೩ ನೆ ಅಂತಸ್ತಿಗೆ ಬರಲೇ ಇಲ್ಲ, ಯಾಕಪ್ಪ ಲಿಪ್ಟ್ ಮೇಲಕ್ಕೆ ಬರ್ತಾನೇ ಇಲ್ಲ, ಏನಾದ್ರು ತೊಂದರೆಯಾಗಿದಿಯ ಅಂತ ಆ ಸೆಕ್ಯುರಿಟಿನವನನ್ನ ಕೇಳಿದಕ್ಕೆ, ಅವನು ಹಿಂದಿ.... ಹಿಂದಿ ಅಂದ, ಸರಿ ನಾವು ಏನಪ್ಪ ನಿಮ್ಮ ವಂಡರ್ ಲಾ ಗೆ ಬಂದು ಏನು ತೊಂದರೆ ಇಲ್ದೇ ವಾಪಸ್ ಹೋಗ್ಬೇಕಾದ್ರೆ ಹಿಂದಿ ಕಲಿತು ಬರ್ಬೇಕಾ ಅಂದ್ವಿ. ಅದುಕ್ಕೆ ಅವನು ಹಿಂದಿ ರಾಶ್ಟ್ರಬಾಶೆ , ಬಾರತದಲ್ಲಿ ಇರ್ಬೇಕು ಅಂದ್ರೆ ಹಿಂದಿ ಗೊತ್ತಿರಬೇಕು, ಇದು ಬಾರತ... ಇದು ಬಾರತ.... ಅಂತ ಹೇಳ್ತಿರ್ಬೇಕಾದ್ರೆ, ನಮ್ ಜೊತೆ ಇದ್ದ ಮಕ್ಕಳ ಗುಂಪಿಂದ ಒಂದು ಚಿಕ್ಕ ಹುಡುಗಿ(ಸುಮಾರು ೫ ನೆ ತರಗತಿ ಓಡ್ತಿರಬೇಕು) ಮುಂದೆ ಬಂದು"ಬಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ! "ಅಂತ ಹೇಳಿದ್ಲು. ಬಾರತದಲ್ಲಿ ಕನ್ನಡನೂ ಇದೆ ಅನ್ನೊದು ಆ ಪುಟ್ಟ ಹುಡುಗಿಗೆ ಕೂಡ ಗೊತ್ತಿದೆ, ಆದ್ರೆ ಇದು ನಮ್ಮ ದೇಶದ ಕೇಂದ್ರ ಸರಕಾರಕ್ಕೆ ಮತ್ತು ಹಿಂದಿನ ರಾಶ್ಟ್ರಬಾಶೆ ಅಂತ ಹೇಳೊ ಹಿಂದಿಯನ್ಸ್ ಗಳಿಗೆ ಗೊತ್ತಿಲ್ವಲ್ಲ.




ನಿಜವಾಗಿಯೂ ಹಿಂದಿಯೇತರರ ಮೇಲೆ ಹಿಂದಿಹೇರಿಕೆ ಮಾಡೋ ಕೇಂದ್ರ ಸರಕಾರ ಮತ್ತು ಒಂದಿಶ್ಟು ಜನ ಹಿಂದಿಯನ್ಸ್ ಗಳು ಹಿಂದಿನ ಸುಳ್ಳ್ ಸುಳ್ಳಾಗಿ ರಾಶ್ಟ್ರಬಾಶೆ ಅಂತ ಹೇಳ್ಕೊಡು ತಿರುಗ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಮತ್ತು ಹಿಂದಿ ರಾಶ್ಟ್ರಬಾಶೆ ಅನ್ನೊರಿಗೆಲ್ಲಾ ನಾವು ಕೊಡಬೇಕಾದ ಒಂದೇ ಒಂದು ಉತ್ತರ... ಬಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.

ಮಂಗಳವಾರ, ಏಪ್ರಿಲ್ 19, 2011

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ




ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.

ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.



ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಶೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ..... ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ.

ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಜನ ಅದೇ ಕನ್ನಡದ ಚಿತ್ರಗಳನ್ನ ಪರಭಾಷೆಗೆ ಡಬ್ ಮಾಡಿದಾಗ, ತಮ್ಮ ಮಾತನ್ನ ತಾವೇ ಮರೆತುಹೋಗುತ್ತಾರೆ. ನಿಜವಾಗಿಯೂ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ಸಂಸ್ಕೃತಿ ಹಾಳಾಗೋದಾದ್ರೆ, ಕನ್ನಡ ಚಿತ್ರ ಬೇರೆ ಭಾಷೆಗೆ ಡಬ್ ಆದಾಗ ಆ ಭಾಷೆಯ ಸಂಸ್ಕೃತಿ ಹಾಳಾಗೋದಿಲ್ವ?

ಡಬ್ಬಿಂಗ್ ನಿಂದ ತೊಂದರೆಗೆ ಒಳಗಾಗೋರು ಒಬ್ರೆ, ಅವ್ರು talent ಇಲ್ಲದೇ ಪರಭಾಷೆಯ ಚಿತ್ರಗಳನ್ನ ಬಟ್ಟಿ ಇಳಿಸಿ ಇದಕ್ಕೆ ಇನ್ಯಾವುದನ್ನೋ ಸೇರಿಸಿ ಕಲೆಸಿ/ಬೆರೆಸಿ ರೀಮೇಕ್ ಮಾಡೋ ಜನ ಮಾತ್ರ. ಕನ್ನಡ ಚಿತ್ರರಂಗದಲ್ಲಿರೋ ನಿಜವಾದ talent ಗಳಿಗೆ ಡಬ್ಬಿಂಗ್ ಅಲ್ಲ, ಇನ್ಯಾವುದೋ ಒಂದು ಬೇರೆ ಗ್ರಹದಿಂದ ಇಳಿದು ಬಂದ್ರು ತೊಂದರೆ ಆಗಲ್ಲ. ಡಬ್ಬಿಂಗ್ ಕನ್ನಡ ಚಿತ್ರ ರಂಗನ ಜರಡಿ ಆಡಿ ಇಲ್ಲಿ talent ಇರೋರು ಮಾತ್ರ ಉಳಿಯೋ ಹಾಗೆ ಮಾಡುತ್ತೆ.

ಡಬ್ಬಿಂಗ್ ವಿರೋಧಿಸೋರು ಕನ್ನಡ...ಕನ್ನಡ.....ಅಂತ ಮುಂದೆ ಹೇಳಿ ಹಿಂದೆ ಪರಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡೊಕ್ಕೆ ಹೊರಟು, ಪರಭಾಷೆಯ ಚಿತ್ರರಂಗದ ಏಜೆಂಟ್ಗಳಂತೆ ಆಡ್ತಿರೋದು ಬಹಳ ಆತಂಕಕಾರಿ. ಡಬ್ಬಿಂಗ್ ಗೆ ವಿರೋಧಿಸೋ ಜನ ಪರಬಾಷೆ ಚಿತ್ರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಕಡೆ ಬಿಡುಗಡೆ ಆಗ್ತಿರೋ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಥವಾ ಅದಕ್ಕೆ ಪರಹಾರ ಯಾಕೆ ಹುಡುಕ್ತಿಲ್ಲ? ಇದರಿಂದ ನಿಜವಾಗಿಯೂ ಇವರಿಗೆ ಕನ್ನಡದ ಬಗ್ಗೆ ಕಾಳಜಿ ಇದ್ಯ ಅನ್ನೋದೇ ಒಂದು ಪ್ರಶ್ನೆಯಾಗಿದೆ. ಇವರು ಡಬ್ಬಿಂಗ್ ವಿರೋಧಿಸುತ್ತಿರೋದು ತಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ಹೊರೆತು ಕನ್ನಡಕ್ಕಾಗಿ ಅಲ್ಲ.


ಡಬ್ಬಿಂಗ್ ನಿಂದ ಅದು ಹಾಳಾಗುತ್ತೆ ಇದು ಹಾಳಾಗುತ್ತೆ ಅಂತ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಹೊರಟಿರೋ ಜನರ ಮಾತನ್ನ ತಲೆಗೆ ಹಾಕಿಕೊಳ್ಳಬೇಡಿ. ಅದೇ ಜನ ನಾಳೆ ಕಾಫಿ ಶಾಪ್ ಚಿತ್ರ ತೆಲುಗುಭಾಷೆನಲ್ಲಿ ಬಿಡುಗಡೆ ಆದ್ರೆ first day first show ನಲ್ಲಿ ನೋಡ್ತಾರೆ. ಕಾಫಿ ಶಾಪ್ ಚಿತ್ರ ಕನ್ನಡದಲ್ಲಿ ಬಂದ್ರೆ ಒಳ್ಳೆದೇ ಅಲ್ವ? ಸುಮ್ನೆ ಕಾಫಿ ಶಾಪ್ ಚಿತ್ರ ಕನ್ನಡಕ್ಕೆ ಡಬ್ ಆಗೋದನ್ನ ಬೆಂಬಲಿಸಿ. ಬಿಡುಗಡೆ ಆದ್ಮೇಲೆ ಆರಾಮಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಕನ್ನಡದಲ್ಲೇ ಸಿನೆಮಾ ನೋಡಿ ಮಜ ಮಾಡಿ.

ಶುಕ್ರವಾರ, ಏಪ್ರಿಲ್ 15, 2011

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?


ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ ಸಂಭಂದವಿಲ್ಲದವರು. ಇದೀಗ ಇದೇ ಏಪ್ರಿಲ್ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ. ಯಾವೂದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಗ್ ಹೇಳಲಾಗಿದೆ.

ಗುಲ್ಬರ್ಗ ಉತ್ಸವದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗುಲ್ಬರ್ಗ ಜಿಲ್ಲೆಯ ಒಬ್ಬೇ ಒಬ್ಬ ಕಲಾವಿದನಿದ್ದಂತಿಲ್ಲ! ಗುಲ್ಬರ್ಗ ಜಿಲ್ಲೆ ಯಾವುದೇ ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ? ಜೊತೆಗೆ ಶಿವರಾಜ್ ಕುಮಾರ್, ಐಂದ್ರಿತಾ ರೇ ರವರನ್ನ ಬಿಟ್ರೆ ಇನ್ನೊಬ್ಬ ಕರ್ನಾಟಕದ ಕಲಾವಿದನಿದ್ದಂತಿಲ್ಲ. ಕಾರ್ಯಕ್ರಮದಲ್ಲಿ ಕಾಟಾಚಾರಕ್ಕೆ ಕರ್ನಾಟಕದ ಕಲಾವಿದರನ್ನ ಕರೆಸಿ ಯಾರೋ ಗುಲ್ಬರ್ಗ ಗೂ ಕರ್ನಾಟಕಕ್ಕೂ ಹತ್ತಿರದ ಸಂಬಂಧವಿರಲಿ ದೂರದ(10000 ಕಿಲೋಮೀಟರ್ ಗಿಂತ ಹೆಚ್ಚು ಅಂದುಕೊಳ್ಳಬಹುದು) ಸಂಬಂದವೂ ಇಲ್ಲದ ಹಿಂದಿಯ ಸುನಿದಿ ಚೌಹಾನ್, ಮಿಕಾ ಸಿಂಗ್, ಶಕ್ತಿಕುಮಾರ್, ಅದ್ನಾನ್ ಸಾಮಿ,ವಾರಸಿ ಸಹೋದರರಿಗೆ ರಾಜಗಂಬಳಿ ಹಾಸಿ ಸ್ವಾಗತ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸರಕಾರವೇ ಹಿಂದಿ ಭಾಷೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ದುರಂತ!!!!

ಗುಲ್ಬರ್ಗ ಉತ್ಸವ, ಗುಲ್ಬರ್ಗ ಜಿಲ್ಲೆಯ ಕಲೆ ಸಂಸ್ಖೃತಿಯ ಪ್ರತೀಕವಾಗಬೇಕಾಗಿತ್ತು. ಗುಲ್ಬರ್ಗ ಜಿಲ್ಲೆಯ ಕಲಾವಿದರಿಗೆ, ಕಲೆಗೆ ಪ್ರಾಮುಖ್ಯತೆ ದೊರೆಯಬೇಕಾಗಿತ್ತು.ಆದರೆ ಆಗಿದ್ದೇ ಬೇರೆ. ಖಾಸಗಿಯಾಗಿ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಕಾರ್ಯಕ್ರಮ ನಡೆಸಿದ್ದರೆ ಯಾರೂ ತೆಲೆಕೆಡೆಸಿಕೊಳ್ಳೊ ಅವಶ್ಯಕತೆ ಇರ್ತಿರ್ಲಿಲ್ಲ, ಆದ್ರೆ ನಮ್ಮ ನಾಡಿನ ಕಲೆ/ಕಲಾವಿದರಿಗೆ ಉತ್ತೇಜನ ನೀಡಬೇಕಾದ ಸರಕಾರವೇ ನಮ್ಮ ನಾಡಿನ ಕಲೆ/ಕಲಾವಿರರನ್ನ ಮೂಲೆಗುಂಪು ಮಾಡಿ ಹೊರ ರಾಜ್ಯದ ಕಲೆ/ ಕಲಾವಿದರಿಗೆ ಪ್ರಾಮುಖ್ಯತೆ ನೀಡೋದು ಎಷ್ಟು ಸರಿ? ಕರ್ನಾಟಕದವರ ತೆರಿಗೆ ಹಣದಲ್ಲಿ ಈ ರೀತಿ ಕಾರ್ಯಕ್ರಮ ನಡೆಸೋದ್ರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡಕ್ಕೆ ಏನು ಉಪಯೋಗ?

ಕೊನೆಯದಾಗಿ- ಸರಕಾರ ಕೋಟಿ ಕೋಟಿ ಖರ್ಚು ಮಾಡಿ ಕನ್ನಡ ಸಮ್ಮೇಳನಗಳನ್ನ ಆಯೋಜನೆ ಮಾಡುತ್ತೆ ಜೊತೆಗೆ ಕನ್ನಡ ಅಭಿವ್ರುದ್ದಿ ಪ್ರಾಧಿಕಾರ ಗಡಿನಾಡ ಉತ್ಸವ ನಡೆಸಿ ಕನ್ನಡದ ವಾತಾವರಣ ನಿರ್ಮಾಣ ಮಾಡ್ತಿವಿ ಅನ್ನುತ್ತೆ. ಇನ್ನೊಂದೆಡೆ ಅದೇ ಸರಕಾರ ಉತ್ಸವ ನಡೆಯೋ ಪ್ರದೇಶಗಳು ಕರ್ನಾಟಕದಲ್ಲೇ ಇಲ್ಲವೆಂಬಂತೆ, ನಮಗೆ ಸಂಬಂಧವಿಲ್ಲದ ಕಾರ್ಯಕ್ರಮವನ್ನ ಆಯೋಜಿಸಿ ನಾಡಿನ ಜನರನ್ನು ನಾಡಿನಿಂದಲೇ ದೂರವಿಡುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಇಲ್ಲಿ ಪೋಲಾಗುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣ ಮಾತ್ರ.


ಉತ್ಸವದ ವೆಬ್ ವಿಳಾಸ- http://www.gulbargafestival.com/