ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

ಗುರುವಾರ, ಡಿಸೆಂಬರ್ 8, 2011

ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?


೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗ್ತಿದೆ. ಪ್ರತಿಸರಿಯಂತೆ ಈ ಸರಿಯೂ ಅನೇಕ ಗೋಶ್ಟಿಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟಗಳನ್ನ ಏರ್ಪಡಿಸಿದ್ದಾರೆ ಇದೆಲ್ಲವುದರ ಜೊತೆಗೆ ಇಲ್ಲಿ  ನಾಡಿನ ಸಾಹಿತ್ಯ ರಂಗದ  ದಿಗ್ಗಜರು ಬಂದು ಸೇರುತ್ತಾರೆ.

ನುಡಿಹಬ್ಬದ ಕುಶಿಯಲ್ಲಿ  ಬಾಗಿಯಾಗೋಕ್ಕೆ ನಾನು ಸಹ ಇಂದು ಗಂಗಾವತಿಗೆ ಹೋಗುವವನಿದ್ದೇನೆ. ಇದಕ್ಕೆಂದು ನಮ್ಮ ಕ.ರಾ.ರ.ಸಾ.ಸಂ ಯ ಬಸ್ಸಿನಲ್ಲಿ ಒಂದು ಟಿಕೆಟ್ ಅನ್ನು ಕಾಯ್ದಿರಿಸಿದ್ದೇನೆ.  ಆದರೆ ಈ ಟಿಕೆಟ್ ನೋಡಿದ ತಕ್ಯಣ ನನ್ನ ಮನಸ್ಸಿನಲ್ಲಿ ಬಂದಿದ್ದು " ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?" ಎಂಬುದು, ಹೀಗೆ ನನ್ನ ಮನಸ್ಸಿನಲ್ಲಿ ಬರೋಕ್ಕೆ ಕಾರಣವಿದೆ. ಅದೇನಂದ್ರೆ ತಂತ್ರಜ್ನಾನ ಇಶ್ಟು ಮುಂದುವರೆದರೂ ಸಹ ಇಂದಿಗೂ ನಮ್ಮ  ಕ.ರ.ಸಾ.ಸಂ ಯವರು ಕನ್ನಡದಲ್ಲಿ ಟಿಕೆಟ್ ಮುದ್ರಿಸಿಕೊಡದಿರೋದು.  ಕ.ರಾ.ರ.ಸಾ.ಸಂ ಯ ಸೀಟು ಕಾಯ್ದಿರಿಸುವ ಟಿಕೆಟ್ ನಲ್ಲಿ ಕಾಯ್ದಿರಿಸುವಿಕೆಗೆ ಸಂಬಂದಿಸಿದ ಎಲ್ಲಾ ಮಾಹಿತಿಗಳು ಇಂಗ್ಲೀಶ್ ನಲ್ಲಿ ಇವೆ. ಇಂಗ್ಲೀಶ್ ಸರಿಯಾಗಿ ಬಲ್ಲವರು ತಮಗೆ ನೀಡಿದ ಟಿಕೆಟ್ ಸರಿಯಿದೆಯೇ ಇಲ್ಲವೇ ಎನ್ನೊದನ್ನ ತಿಳಿಯೋಕ್ಕೆ ಸಾದ್ಯ, ಇಂಗ್ಲೀಶ್ ಗೊತ್ತಿಲ್ಲದವರ ಕತೆ ದೇವರೇ ಬಲ್ಲ. ಗಂಗಾವತಿಯ ನುಡಿಹಬ್ಬಕ್ಕೆ ಬರಬೇಕಾದವರು ಅಕಸ್ಮಾತ್ ತಪ್ಪಾಗಿ ಬೇರೆಯಾವುದೋ ಟಿಕೆಟ್ ಪಡೆದು, ಸರಿಯಿದೆಯೇ ಎಂದು ನೋಡೊಕ್ಕೆ ತಿಳಿಯದೇ ಇನ್ನೆಲ್ಲೋ ಹೋಗುವ ಪರಿಸ್ತಿತಿ ಬಂದ್ರೆ ಅದಕ್ಕೆ ಆಶ್ಚರ್ಯಪಡಬೇಕಾದ್ದಿಲ್ಲ.


ಸರಕಾರ ಪ್ರತಿವರ್ಶ ಕೋಟ್ಯಂತರ ರೂಪಾಯಿ ಕರ್ಚು ಮಾಡಿ ಸಾಹಿತ್ಯ ಸಮ್ಮೇಳನದ ಜೊತೆಗೆ ಹಲವಾರು ತರದ ಕನ್ನಡ ಹಬ್ಬಗಳನ್ನ ಆಚರಿಸುತ್ತದೆ. ಆದರೆ ಅದೇ ಸರಕಾರದ  ಕ.ರಾ.ರ.ಸಾ.ಸಂ ಸೇರಿದಂತೆ ಹಲವಾರು ಸಂಸ್ತೆಗಳು ಕನ್ನಡದಲ್ಲಿ ಆಡಳಿತವನ್ನ ನಡೆಸದೇ ತಮ್ಮ ಸೇವೆಗಳನ್ನ ಕನ್ನಡಿಗರಿಂದ ದೂರಕ್ಕೆ ಕೊಂಡೊಯ್ಯುತ್ತಿರುವುದು ವಿಪರ್ಯಾಸವೇ ಸರಿ!  ಕ.ರಾ.ರ.ಸಾ.ಸಂ ಯವರಿಗೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಳಕಳಿಯಿದ್ದಿದ್ದೇ ಆಗಿದ್ದಲ್ಲಿ ತಮ್ಮ ಗ್ರಾಹಕ ಸೇವೆಯಲ್ಲಿ ಬಳಕೆಯಾಗಿರುವ ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ಕನ್ನಡಿಗರಿಗೆ ತಮ್ಮ ಸೇವೆಯನ್ನ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಕ.ರಾ.ರ.ಸಾ.ಸಂ ವರ್ಶಕ್ಕೊಮ್ಮೆ ಒಬ್ಬ ಕನ್ನಡದ ಸಾದಕರಿಗೆ ನ್ರುಪತುಂಗ ಪ್ರಶಸ್ತಿ ನೀಡುವುದೇ ಕನ್ನಡ ಕೆಲಸವೆಂದು ತಿಳಿದಿದಿಯೇನೋ(?). ವರ್ಶಕ್ಕೊಮ್ಮೆ ಪ್ರಶಸ್ತಿ ನೀಡಿ ಪ್ರತಿದಿನ ಕನ್ನಡಿಗರಿಂದ ತನ್ನ ಸೇವೆಗಳನ್ನ ದೂರಕ್ಕೆ ಕೊಂಡೊಯ್ಯುತ್ತಿರೋದು ನೋಡಿದ್ರೆ ಆ ಪ್ರಶಸ್ತಿ ನೀಡೋದಕ್ಕೆ ಯಾವುದೇ ಅರ್ತ ಇರೋಲ್ಲ ಅನ್ನಿಸುತ್ತೆ.

ತಂತ್ರಜ್ನಾನ ಬಳಕೆಯಿಂದ ನಿಜಕ್ಕು ಕನ್ನಡದಲ್ಲಿ ಸೇವೆಯನ್ನ ಸುಲಬವಾಗಿ ನೀಡಬಹುದು ಇದರಿಂದ ಜನರಿಗೆ ತಮ್ಮ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾದ್ಯ ಅನ್ನೊದನ್ನ  ಕ.ರಾ.ರ.ಸಾ.ಸಂ ಯಂತಹ ಸರಕಾರಿ ಸಂಸ್ತೆಗಳು ತಿಳಿದುಕೊಳ್ಳೋದು ಯಾವಾಗ?

ಕೊನೆಯದಾಗಿ: “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಎಂಬ ವಿಶಯವಾಗಿ ನನ್ನ ಸ್ನೇಹಿತ ಚೇತನ್ ಇದೇ ನುಡಿಹಬ್ಬದಲ್ಲಿ “ಆಧುನಿಕ ಜಗತ್ತು ಮತ್ತು ಕನ್ನಡ”( ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ)  ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಇದರಲ್ಲಿ  ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಮಾತನಾಡಲಿದ್ದಾರೆ. ಇದೇ ವಿಚಾರ ಸಂಕಿರಣದಲ್ಲಿ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ.

ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?

ಶುಕ್ರವಾರ, ನವೆಂಬರ್ 4, 2011

ನಮ್ಮ ತ್ಯಾಗದಿಂದಲೇ ಅಲ್ಲವೇ ನಮ್ಮ ಮೆಟ್ರೋ ಓಡುತ್ತಿರುವುದು?

ನಮ್ಮ ಮೆಟ್ರೋನ ಬಗ್ಗೆ ನವಂಬರ್ 3 ರಂದು ಡೆಕನ್ ಹೆರಾರ್ಡ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ, ಈ ವರದಿಯ ಪ್ರಕಾರ, ನಮ್ಮ ಮೆಟ್ರೊ, ಬೆಂಗಳೂರು ನಗರ ಪಾಲಿಕೆಯ ಹಲವಾರು ಜಾಗಗಳನ್ನ ಬಿಟ್ಟಿಯಾಗಿ ವಶಪಡಿಸಿಕೊಂಡು ಅಲ್ಲಿ ಕಾಮಗಾರಿಯನ್ನ ನಡೆಸುತ್ತಿದೆ, ಪಾಲಿಕೆಯ ಸುಮಾರು 65 ರಿಂದ 70 ಸಾವಿರ ಅಡಿಗಳಶ್ಟು ಜಾಗ ಮತ್ತು ಅಲ್ಲಿ ಇರುವ ಕಟ್ಟಡ ನಮ್ಮ ಮೆಟ್ರೋ ಪಾಲಾಗಿದೆ. ಈ ಆಸ್ತಿ ನೂರಾರು ಕೋಟಿ ಬೆಲೆಬಾಳುತ್ತದೆ.

ಇವಿಶ್ಟೇ ಅಲ್ಲದೇ ನಮ್ಮ ಮೆಟ್ರೊಗೆಂದು ನಗರದ ಹಲವಾರು ಕಡೆಗಳಲ್ಲಿ ನಮ್ಮ ನಾಡಿನ ಜನರು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಹಣಕ್ಕೆ ತಮ್ಮ ಜಾಗವನ್ನ ಕೊಟ್ಟಿದ್ದಾರೆ, ಹಲವಾರು ಅಂಗಡಿ ಮುಂಗಟ್ಟುಗಳನ್ನ ನಮ್ಮ ಮೆಟ್ರೋಗೆಂದು ಮುಚ್ಚಿಸಲಾಗಿದೆ. ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೇಟ್ರೋ ಕಾಮಗಾರಿಯಿಂದ ಉಂಟಾಗಿರುವ ಟ್ರಾಪಿಕ್ ವೈಪರಿತ್ಯವನ್ನು ದಿನ ನಿತ್ಯ ನಮ್ಮ ಜನ ಅನುಬವಿಸುತ್ತಿದ್ದಾರೆ.. ಇಂತಹ ನಮ್ಮ ನಾಡಿನ ಜನರ ತ್ಯಾಗದಿಂದಲೇ ನಮ್ಮ ಮೆಟ್ರೊ ಬಿಡುಗಡೆಯಾಗಿ ಓಡಾಡಲು ಸಾದ್ಯವಾಗಿರುವುದು ಅಲ್ಲವೇ? ಆದರೆ ಇವ್ಯಾವು ಲೆಕ್ಕಕ್ಕೆ ಇಲ್ಲವೆಂಬಂತೆ ನಮ್ಮ ಮೆಟ್ರೊ ಬೆಂಗಳೂರಿಗರನ್ನ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ..

ನಮ್ಮ ನಾಡಿನ ಜನರ ತ್ಯಾಗವಿದ್ದರೂ ಸಹ ನಮ್ಮ ನಾಡಿನ ಬಾಶೆಗೆ ಮನ್ನಣೆ ಸಿಗಬೇಕು, ನಮ್ಮ ನಾಡಿನ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನ ಬೇಡಿಕೊಳ್ಳುವ ಪರಿಸ್ತಿತಿಯನ್ನ ನಮ್ಮ ಮೆಟ್ರೋ ನ ಅದಿಕಾರಿಗಳು ನಿರ್ಮಿಸಿದ್ದಾರೆ. ನಮ್ಮ ನಾಡಿನ ಜನರ ಬಾಶಾ ಮತ್ತು ಉದ್ಯೋಗದ ಕಳಕಳಿಗೆ, ಮೆಟ್ರೊ ಅದಿಕಾರಿಗಳು ಉದ್ದಟ ತನ ತೋರುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಪರರಾಜ್ಯದಿಂದ ಬಂದು ನಮ್ಮ ಮೆಟ್ರೊನಲ್ಲಿ ಕೆಲಸ ಮಾಡುತ್ತಿರುವರುಗಳು ನಮ್ಮ ನಾಡು ನುಡಿ ವಿರುದ್ದವಾಗಿ ಮಾತನಾಡಿ ನಮ್ಮ ಸ್ವಾಬಿಮಾನವನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡ ವಿರೋದಿ ಮೆಟ್ರೊ ಅದಿಕಾರಿಗಳು ಮತ್ತು ಪರರಾಜ್ಯದಿಂದ ಬಂದು ಕನ್ನಡ ವಿರೋದಿತನ ತೋರುತ್ತಿರುವ ಮೆಟ್ರೊ ಕೆಲಸಗಾರರಿಗೆ ದಿಕ್ಕಾರವಿರಲಿ... ನಮ್ಮ ನಾಡಿನ ಜನರ ತ್ಯಾಗಕ್ಕೆ ತಕ್ಕ ಮಾನ್ಯತೆ ಸಿಗಲಿ

ಭಾನುವಾರ, ಅಕ್ಟೋಬರ್ 16, 2011

ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡದ ಜ್ನಾನ ಅತ್ಯಂತ ಅವಶ್ಯಕವಾದುದು.

ಬೆಂಗಳೂರು ಮೆಟ್ರೋ ಕೆಲವೇ ದಿನಗಳಲ್ಲಿ ಪ್ರಾರಂಬವಾಗುತ್ತಿದೆ. CISF ಮೆಟ್ರೋ ಗೆ ರಕ್ಷಣೆ ನೀಡತ್ತಾರೆಂದು ಹೇಳಲಾಗುತ್ತಿದೆ. CISF ನವರು ರಕ್ಷಣೆ ನೀಡುತ್ತಾರೆಂಬುದು ನಿಜಕ್ಕು ಸಂತೋಶದ ವಿಶಯ CISF ನವರಿಗೆ ಉತ್ತಮ ರೀತಿಯ ತರಬೇತಿ ಕೊಡಲಾಗಿರುತ್ತದೆ ಮತ್ತು ಇದು ದುಶ್ಟ್ರ ಕ್ರುತ್ಯಗಳ ತಡೆಗೆ ತುಂಬಾನೆ ಅನುಕೂಲಕಾರಿಯಾಗಿರುತ್ತೆ.


ಆದರೆ CISF ನವರನ್ನ ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ನೋಡಿದ್ದೇವೆ ಅವರುಗಳಿಗೆ ಕನ್ನಡದ ಜ್ನಾನವೇ ಇರುವುದಿಲ್ಲ, ಅನೇಕರು ಹಲವಾರು ಬಾರಿ ವಿಮಾನ ನಿಲ್ದಾಣದಲ್ಲಿ ಇದರಿಂದ ತೊಂದರೆಗೊಳಗಿರುವುದೂ ಉಂಟು. ತುರ್ತು ಸಮಯದಲ್ಲಿ ಪರಿಸ್ತಿತಿಯನ್ನ ನಿಬಾಯಿಸಲು ಇತರೆ ಕಟಿಣ ತರಬೇತಿಗಳಂತೆ ಕನ್ನಡ ಬಾಶೆಯ ಜ್ನಾನವೂ ಅತ್ಯಂತ ಅವಶ್ಯಕವಲ್ಲವೇ?

ಬೆಂಗಳೂರಿನ ವಿಮಾನ ನಿಲ್ದಾಣವನ್ನ ಬಳಸುವವರ ಸಂಕ್ಯೆಗಿಂತ ಮೆಟ್ರೋ ಬಳಸುವ ಜನ ಸಾಮಾನ್ಯರ ಸಂಕ್ಯೆ ಹೆಚ್ಚಾಗಿಯೇ ಇರುತ್ತದೆ. ಮೆಟ್ರೋ ನಿಲ್ದಾಣದಲ್ಲಿ ಇರುವ CISF ನವರು ದುಶ್ಟ ಕ್ರುತ್ಯಗಳ ತಡೆಯುವುದರ ಜೊತೆಗೆ ಪ್ರಯಾಣಿಕರ ಸ್ನೇಹಿಯಾಗಿ ಅನೇಕ ಸಮಯಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಇವರಿಗೆ ಕನ್ನಡ ಬಾಶೆಯ ಜ್ನಾನ ಇರಲೇಬೇಕು. ಇದರಿಂದ ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡ ಬಾಶೆಯ ಕಲಿಕೆ ಅತ್ಯಂತ ಅವಶ್ಯಕವಾದುದು ಕೂಡ.

ಬೆಂಗಳೂರು ಮೆಟ್ರೋ ನವರು CISF ನವರನ್ನ ರಕ್ಷಣೆಗೆ ಕರೆಸಿಕೊಳ್ಳುವುದರ ಜೊತೆಗೆ ಎಲ್ಲಾ CISF ಸಿಬ್ಬಂದಿಗಳಿಗೆ ಕನ್ನಡದ ಜ್ನಾನಕ್ಕಾಗಿ ತರಬೇತಿ ನಡೆಸಿ ಆ ನಂತರ ಕೆಲಸದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕು, ಇದು ಬೆಂಗಳೂರು ಮೆಟ್ರೋ ನಿಗಮದ ಕರ್ತವ್ಯ ಕೂಡ

ಶುಕ್ರವಾರ, ಸೆಪ್ಟೆಂಬರ್ 30, 2011

ಮೈಸೂರು ದಸರ ನಾಡ ಹಬ್ಬನ?

ಮೈಸೂರು ದಸರಾ ೪೦೦ ಕ್ಕು ಹೆಚ್ಚು ಆಚರಣೆಗಳನ್ನ ಕಂಡಿದ್ದು ಕೆಲವು ವರ್ಶಗಳಿಂದ ಕರ್ನಾಟಕ ಸರಕಾರ ನಾಡ ಹಬ್ಬವನ್ನಾಗಿ ಆಚರಿಸುತ್ತಿದೆ. ದಸರಾ ಸಮಯದಲ್ಲಿ ವಿದೇಶೀ ಪ್ರವಾಸಿಗರೂ ಸೇರಿದಂತೆ ಲಕ್ಶಾಂತರ ಪ್ರವಾಸಿಗರು ಮೈಸೂರು ದಸರದಲ್ಲಿ ಬಾಗವಹಿಸುತ್ತಾರೆ. ದಸರಾದಲ್ಲಿ ನಮ್ಮ ಕಲೆ ಸಂಸ್ಕ್ರುತಿ ಬಾಶೆಯನ್ನ ಎತ್ತಿ ಹಿಡಿಯಲು ಸರಕಾರ ಕೋಟ್ಯಾಂತರ ಹಣ ಬಳಸುತ್ತೆ.


ಇತ್ತೀಚಿನ ದಿನಗಳಲ್ಲಿ ದಸರದಲ್ಲಿ ಯುವ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ,ಕುಸ್ತಿ, ಗ್ರಾಮೀಣ ದಸರಾ, ಆಹಾರ ಮೇಳ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಜನರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮಗಳನ್ನ ರೂಪಿಸಿದೆ. ಆದರೆ..........ಈ ಕಾರ್ಯಕ್ರಮಗಳಲ್ಲಿ ಆಗುತ್ತಿರೋದೇನು?????

ನಾಡ ಹಬ್ಬದಲ್ಲಿ ನಮ್ಮ ನಾಡಿನ ಬಾಶೆ ಕಲೆ ಸಂಸ್ಕ್ರುತಿಯನ್ನ ಎತ್ತಿ ಹಿಡಿಯೋ ಕೆಲ್ಸ ಆಗಬೇಕಿತ್ತು ಆದ್ರೆ ನಮ್ಮ ನಾಡಿನದ್ದಲ್ಲದ ಕಲೆ, ಬಾಶೆ, ಸಂಸ್ಕ್ರುತಿಯನ್ನ ಎತ್ತಿ ಕುಣಿಸುತ್ತಿದ್ದಾರೆ. ಯುವ ದಸರಾದಿಂದ ಹಿಡಿದು ಅನೇಕ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲಿಹೋದರಲ್ಲಿ ಸಿಗೋದು ಹೊರನಾಡಿನ ಕಲೆ ಸಂಸ್ಕ್ರುತಿಯ ಮೇಲುಗೈ !!!! ಇದು ಯಾಕೆ ಎಂದು ಕೇಳಿದ್ದಕ್ಕೆ ಪೇಸ್ ಬುಕ್ಕಿನಲ್ಲಿ ಇವರಿಂದ ಬಂದ ಉತ್ತರವನ್ನ ನೊಡಿ-

Mysore Dasara 2011 How come taste/likes of people appearing for these shows and also Music show at Palace are appears to be different from views/openions expressed here? If they haven't liked a show by a non-kannadiga, they would have stayed home! The programmes are not ad-hoc but they are published in advance...


ಮೈಸೂರು ದಸರ ನೊಡಲು ಬರುವ ಪ್ರವಾಸಿಗರು ನಮ್ಮ ನಾಡಿನ ಕಲೆ ಸಂಸ್ಕ್ರುತಿಯ ಪರಿಚಯ ಪಡೆಯಲು ಬರುತ್ತಾರಲ್ಲವೇ? ಈ ಪ್ರವಾಸಿಗರಿಗೆ ಸರಕಾರ ದಸರಾದ ಮೂಲಕ ಪರಿಚಯಿಸಲು ಹೊರಟಿರುವುದು ಯಾವ ಸಂಸ್ಕ್ರುತಿಯನ್ನ? ಯಾವ ಬಾಶೆಯನ್ನ? ಯಾವ ನಾಡಿನ ಕಲೆಗಳನ್ನ???ಇವರು ಮೇಲೆ ಹೇಳಿರೋದು ನಿಜವಾಗಿದ್ದಲ್ಲಿ ಸರಕಾರ ದಸರಾವನ್ನ ನಾಡ ಹಬ್ಬವಾಗಿ ಆಚರಿಸಿದ್ದರ ಅವಶ್ಯಕತೆಯೇನಿದೆ? ದಸರಾಕ್ಕೆ ಜನಿಫ಼ರ್ ಲೋಪೇಸ್ ಕರೆಸಿದ್ರೆ ಅತವಾ ಇನ್ಯಾರನ್ನೊ ಕರೆಸಿ ಕ್ಯಾಬರೆ ನಡೆಸಿದ್ರೆ ಅತವಾ ಕುಸ್ತಿ ಪಂದ್ಯಾವಳಿ ಬದಲಿಗೆ WWF championship ನಡೆಸಿದ್ರೆ ಅತವಾ ಜಂಬು ಸವಾರಿ ಜೊತೆಗಿನ ಸ್ತಬ್ದ ಚಿತ್ರಗಳ ಬದಲಿಗೆ ಮಾಡೆಲ್ ಗಳ ಕ್ಯಾಟ್ ವಾಕ್ ನಡೆಸಿದ್ರೆ ಇನ್ನು ಹೆಚ್ಚು ಜನ ಬರಬಹುದೇನೋ..... ಆದ್ರೆ ನಾಡಹಬ್ಬವನ್ನಾಗಿ ಆಚರಿಸೋ ಸರಕಾರಕ್ಕೆ ಯಾವ ಕಾರ್ಯಕ್ರಮ ನಡೆಸುವ ಮೂಲಕ ನಮ್ಮ ಸಂಸ್ಕ್ರುತಿ ಕಲೆ ಬಾಶೆಯನ್ನ ಎತ್ತಿಹಿಡಿಯಬೇಕು ಎನ್ನುವುದು ಗೊತ್ತಿರಬೇಕಲ್ವೇ?

ನಮ್ಮ ನಾಡಿಗೆ ಸಂಬಂದಪಡದ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಸರಕಾರ ಪ್ರವಾಸಿಗರಿಗೆ ಬೇರೆ ನಾಡಿನ ಕಲೆ, ಸಂಸ್ಕ್ರುತಿ ಮತ್ತು ಬಾಶೆಯನ್ನ ಪರಿಚಯಿಸಲು ಮತ್ತು ಅವಕ್ಕೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಸರಿಯೇ??? ಒಮ್ಮೆ ಯೋಚಿಸಿ...........

ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.

ಬುಧವಾರ, ಆಗಸ್ಟ್ 17, 2011

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತೆ!


ಕೆಲ ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬ ಗಾಡಿ ನಿಲ್ದಾಣವಲ್ಲದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸಿದ್ದನಂತೆ, ಆ ಕಾರಣಕ್ಕೆ ಬೆಂಗಳೂರು ನಗರ ಟ್ರಾಪಿಕ್ ಪೋಲೀಸರು ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ೧೦೦% ದಂಡ ಕಟ್ಟಬೇಕು ಅಂತ ಒಂದು ಚೀಟಿನ ಕಾರಿಗೆ ಅಂಟಿಸಿ ಹೋಗಿದ್ದರಂತೆ-

ಆ ಚೀಟಿ ನೋಡಿ-



ನನ್ನ ಸ್ನೇಹಿತ ಆ ಚೀಟಿ ತಗೊಂಡು ಪೋಲೀಸ್ ಟಾಣಿಗೆ ಹೋಗಿ ದಂಡ ಕಟ್ಟಿದ ನಂತರ- ಯಾಕ್ ಸಾರ್ ಈ ಚೀಟಿ ಬರಿ ಇಂಗ್ಲೀಶ್ ನಲ್ಲೆ ಇದೆ, ಇದರಲ್ಲಿ ೨೪ ಗಂಟೆ ಒಳಗೆ ದಂಡ ಕಟ್ಟಬೇಕು ಅಂತ ಬೇರೆ ಇದೆ. ಅಕಸ್ಮಾತ್ ಇಂಗ್ಲೀಶ್ ಗೊತ್ತಿಲ್ಲದವರ ಕೈಗೆ ಇದು ಸಿಕ್ಕಿದ್ರೆ ಏನ್ ಗತಿ ಪಾಪ, ಅಂತ ಅಲ್ಲಿನ ಅದಿಕಾರಿನ ಕೇಳಿದ್ದನೆ. ಅದಕ್ಕೆ ಪೋಲೀಸ್ ಅದಿಕಾರಿ ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅದುಕ್ಕೆ ಇಂಗ್ಲೀಶ್ ನಲ್ಲಿ ಇದೆ ಅಂತ ಹೇಳಿ ಕಳಿಸಿದ್ದಾರೆ.

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತ ಇಟ್ಟುಕೊಂಡರೂ ನಮ್ಮ ಬಾಶೆನ ಬಿಡಬೇಕು, ಇಂಗ್ಲೀಶ್ ಬಳಸಬೇಕು ಎಂದೇನಿಲ್ಲ ಅಲ್ವ? ಜಗತ್ತಿನ ಎಲ್ಲಾ ಇಂಟರ್ನಾಶಿನಲ್ ಸಿಟಗಳಲ್ಲಿ ಅವರವರ ಬಾಶೆಗಳಿಗೆ ಪ್ರಾಮುಕ್ಯತೆ ಕೊಡ್ತಾರೆ ಹೊರೆತು ಇಂಗ್ಲೀಶ್ ಅತವಾ ಇನ್ಯಾವುದೋ ಬಾಶೆಗೆ ಅಲ್ಲ ಅಲ್ವ.

ಕರ್ನಾಟಕ ಸರಕಾರದ ಸಂಸ್ತೆಯಾದ ಬೆಂಗಳೂರು ಟ್ರಾಪಿಕ್ ಪೋಲೀಸ್ ಸಂಸ್ತೆ ತನಗೂ ಸರಕಾರದ ಆಡಳಿತದಲ್ಲಿ ಕನ್ನಡದ ನಿಯಮಕ್ಕು ಯಾವುದೇ ಸಂಬಂದವಿಲ್ಲ. ತನಗೆ ಸರಕಾರದ ನಿಯಮ ಅನ್ವಯಿಸೊಲ್ಲ ಅನ್ನೊ ತರ ಎಲ್ಲೆಲ್ಲಿ ಆಗುತ್ತೊ ಅಲ್ಲೆಲ್ಲ ಕನ್ನಡವನ್ನ ತೆಗೆದುಹಾಕೊ ಕೆಲ್ಸ ಮಾಡ್ತಿದೆ, ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಗಾಡಿ ಓಡಿಸಬೇಕು ಅಂದ್ರೆ ಬೆಂಗಳೂರು ಇಂಟರ್ನಾಶಿನಲ್ ಸಿಟಿ, ಇಲ್ಲಿ ಗಾಡಿ ಓಡಿಸಬೇಕು ಅಂದ್ರೆ ಇಂಗ್ಲೀಶ್ ಗೊತ್ತಿರಬೇಕು ಅನ್ನೊ ನಿಯಮ ಹೊರಡಿಸಿದ್ರು ಅಚ್ಚರಿಪಡಬೇಕಾಗಿಲ್ಲ.

ಅಚ್ಚರಿಪಡಬೇಕಾದ ವಿಶಯ ಅಂದ್ರೆ, ತಂತ್ರಜ್ನಾನ ಬಳಸುವ ನೆಪದಲ್ಲಿ, ಸಂಸ್ತೆ ತನ್ನಲ್ಲ ವ್ಯವಸ್ತೆಯನ್ನು ವಲಸಿಗರಿಗೆಂದೇ ನಿರ್ಮಿಸಲು ಹೊರಟಿದೆ. ಕನ್ನಡಿಗರಿಗೆ ತೊಂದರೆ ಆದ್ರು ಪರವಾಗಿಲ್ಲ, ವಲಸಿಗರಿಗೆ ತೊಂದರೆ ಆಗಬಾರದು ಎನ್ನುವಂತಹ ಸಂಸ್ತೆಯ ನಿಲುವು ಕಂಡನಾಹ೯ವಾದುದು. ಸರಕಾರ ಮತ್ತು ಆಡಳಿತದಲ್ಲಿ ಕನ್ನಡದ ಅನುಶ್ಟಾನಕ್ಕೆಂದೇ ಮಾಡಿರುವ ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಇತ್ತಕಡೆ ಗಮನ ಹರಿಸಬೇಕು.

ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.

ಸೋಮವಾರ, ಜುಲೈ 4, 2011

ಪೆದ್ದುತನದ ಪರಮಾವದಿ?

ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ....


ಈ ರೀತಿಯ ಕಾರ್ಯಕ್ರಮಗಳನ್ನ ಬಳಸಿಕೊಂಡು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ಬೇರೆ ಬಾಶೆಯ ಚಿತ್ರರಂಗದರು ತುಂಬ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ, ಆದರೆ ದುರದ್ರುಶ್ಟ ಅಂದ್ರೆ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಪರಬಾಶೆಯ ಹಾಡು/ಕುಣಿತದೊಂದಿಗೆ ಪರಬಾಶೆಯ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸೋಕ್ಕೆ ಹೊರಟಿರೋದು ಯಾಕೆ ಅನ್ನೊದು ಗೊತ್ತಾಗುತ್ತಿಲ್ಲ.



ಕಾರ್ಯಕ್ರಮಗಳಲ್ಲಿ- ಕನ್ನಡಿಗರು ಕನ್ನಡ ಸಿನೆಮಾಗಳನ್ನ ನೋಡಿ ಉತ್ತೇಜನ ಕೊಡಬೇಕು....., ಸಿನೆಮಾ ನೋಡೊ ಹವ್ಯಾಸ ಹೊರ ರಾಜ್ಯದಲ್ಲಿರುವಶ್ಟು ನಮ್ಮಲ್ಲಿಲ್ಲ....., ಕನ್ನಡ ಸಿನೆಮಾ ನೋಡೊಕ್ಕೆ ಜನರೇ ಇಲ್ಲ...ಸಿನೆಮಾವನ್ನ ತಿಯೇಟರಿನಲ್ಲೇ ನೋಡಿ....ಹೀಗೆ ಬಾಶಣಗಳನ್ನ ಮಾಡಿ.. ಅದೇ ಕಾರ್ಯಕ್ರಮದಲ್ಲಿ ಪರಬಾಶೆಯ ಹಾಡು/ಕುಣಿತ ನಡೆಸಿದರೆ ಕನ್ನಡಿಗರ ಪಾಡು ಏನಾಗಬಾರದು. ಗಂಟೆಗಟ್ಟಳೆ ಬಾಶಣ ಮಾಡಿ ಚಿತ್ರರಂಗದ ಎಲ್ಲಾ ತೊಡುಕು/ತೊಂದರೆಗಳಿಗೆ ಕನ್ನಡ ಚಿತ್ರ ನೋಡುಗರನ್ನೇ ಹೆಚ್ಚು ಗುರಿಯನ್ನಾಗಿಸಿ, ಪರಬಾಶೆಯ ಚಿತ್ರಗಳಿಗೆ ಕೈಮುಗಿಯುವ ಜನರಿಗೆ ನೈತಿಕತೆಯ ಬಗ್ಗೆ ಅರಿವಿದೆಯೇ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರೆ ಪರಬಾಶೆಯ ಸಿನೆಮಾಗಳಿಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಇವರಿಗೆ ಕನ್ನಡದ ಬಗ್ಗೆ ಕಳಕಳಿ ಇದೆಯೇ ಎಂಬ ಪ್ರಶ್ನೆ ಹುಟ್ಟೊ ಹಾಗೆ ಮಾಡಿದೆ. ಮತ್ತು ಇದರ ಬಗ್ಗೆ ಚಿತ್ರರಂಗದಲ್ಲಿ ಎಲ್ಲೂ ವಿರೋದ ಕಂಡುಬರದಿರುವುದು ಏಕೆ ಎನ್ನುವುದು ತಿಳಿಯುತ್ತಿಲ್ಲ.


ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ, ಮತ್ತು ಮೊನ್ನೆ ನಡೆದಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೂ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳೊ ಅವಶ್ಯಕತೆ ಕೂಡ ಇದೆ. ಇದನ್ನ ಬಿಟ್ಟು ಹಿಂದಿ ಅತವಾ ಇನ್ಯಾವುದೋ ಹಾಡಿಗೆ ಕುಣಿಯೋದರ ಮೂಲಕ ಕನ್ನಡದ ಚಿತ್ರರಂಗದ ಮಾರುಕಟ್ಟೆಯನ್ನ ಕಡಿಮೆ ಮಾಡಿಕೊಳ್ತಿರೋದು ಪೆದ್ದುತನದ ಪರಮಾವದಿ ಅಲ್ವ?

ನಿಮಗೂ ಕನ್ನಡ ಕಾರ್ಯಕ್ರಮದಲ್ಲಿ ಪರಬಾಶೆಯ ಕುಣಿತ ಏಕೆ ಅನ್ನೊ ಪ್ರಶ್ನೆ ಇದ್ರೆ,
ಚಿತ್ರರಂಗದ ಅನೇಕರು ಪೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳಲ್ಲಿ ಸುಲಬವಾಗಿ ಸಿಗ್ತಿದ್ದಾರೆ ಅವರಿಗೆ ಈ ವಿಶಯವನ್ನು ತಿಳಿಸಿ, ಮುಂದಿನ ಕಾರ್ಯಕ್ರಮದಲ್ಲಾದ್ರು ಸರಿ ಮಾಡಿಕೊಳ್ತಾರಾ ನೋಡೋಣ.

ಬುಧವಾರ, ಜೂನ್ 29, 2011

ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ

ಬೆಂಗಳೂರಿನ ಟ್ರಾಪಿಕ್ ನಿಯಂತ್ರಿಸುವಲ್ಲಿ ದೇಶದ ಹಲವಾರು ನಗರಗಳ ಪೋಲೀಸರಿಗೆ ಹೋಲಿಸಿದರೆ ನಮ್ಮ ಪೋಲೀಸರು ಬಹಳ ಮುಂದಿದ್ದಾರೆ. ತಂತ್ರಜ್ನಾನವನ್ನ ಬಳಸೋದರ ಮೂಲಕ ಟ್ರಾಪಿಕ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹದ್ದು.

ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಟ್ರಾಪಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪೋಲೀಸಿನವರಶ್ಟೇ ಸಾರ್ವಜನಿಕರ ಪಾತ್ರವೂ ಇದೆ. ಟ್ರಾಪಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರುತಿ ಅತ್ಯಗತ್ಯ. ಈ ಜಾಗ್ರುತಿ ಕೆಲಸವನ್ನು ಪೋಲೀಸಿನವರ ಮಾಡುತ್ತಿಲ್ಲವೆಂದೇನಿಲ್ಲ. ಸಾರ್ವಜನಿಕರಲ್ಲಿ ಟ್ರಾಪಿಕ್ ಸಮಸ್ಯೆ ಬಗ್ಗೆ ಜಾಗ್ರುತಿ ಮೂಡಿಸೋ ಕೆಲ್ಸನೂ ಸಹ ಪೋಲೀಸಿನವರು ಮಾಡುತ್ತಿದ್ದಾರೆ. ಆದರೆ ಇದು ಪರಿಣಾಮಕಾರಿಯಾಗಿಲ್ಲ ಅನ್ನೊದು ನನ್ನ ಅನಿಸಿಕೆ.

ಟ್ರಾಪಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಕೆಲ್ಸದಲ್ಲಿ ಬಾಶೆ ಅತ್ಯಂತ ಮುಕ್ಯ. ಜನರಿಗೆ ಅರ್ತ ಆಗೋ ಬಾಶೆಲಿ ಈ ಕೆಲ್ಸ ನಡೆದ್ರೆ ಪರಿಣಾಮಕಾರಿಯಾಗಿರುತ್ತೆ. ಬೆಂಗಳೂರಿನ ಬಹುಸಂಕ್ಯಾತ ಜನರ ಬಾಶೆ ಕನ್ನಡದಲ್ಲಿ ಜಾಗ್ರುತಿ ಕಾರ್ಯಕ್ರಮ ನಡೆದ್ರೆ ಜಾಗ್ರುತಿಯ ಸಂದೇಶ ಜನರಿಗೆ ತಲುಪುತ್ತೆ. ವಿಶಾದದ ಸಂಗತಿಯೆಂದರೆ, ಪೋಲೀಸಿನವರು ಸಾರ್ವಜನಿಕರನ್ನ ಜಾಗ್ರುತಿ ಮಾಡೋ ಕಾರ್ಯದಲ್ಲಿ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಬಹುಸಂಕ್ಯಾತ ಕನ್ನಡಿಗರನ್ನ ಮರೆತಿರುವುದು ದುರದ್ರುಶ್ಟವೇ.

ಟ್ರಾಪಿಕ್ ಸಮಸ್ಯೆಯ ಬಗ್ಗೆ ನಗರದಲ್ಲಿ ಹಲವಾರು ಹೋರ್ಡಿಂಗ್ ಗಳನ್ನ ನೋಡಬಹುದು ಈ ಹೋರ್ಡಿಂಗ್ ಗಳನ್ನ ಪೋಲೀಸ್ ಇಲಾಕೆ ಜನರಿಗೆ ಜಾಗ್ರುತಿ ಮಾಡೊಕ್ಕೆ ಅಂತನೇ ಹಾಕಿರೋದು . ಆದ್ರೆ ಹೆಚ್ಚಿನ ಹೋರ್ಡಿಂಗ್ ಗಳಲ್ಲಿ ಬಹುಸಂಕ್ಯಾತ ಬೆಂಗಳೂರಿಗರಿಗೆ ಅರ್ತವಾಗದ ಇಂಗ್ಲೀಶ್ ಬಾಶೆಯಲ್ಲಿ ಮಾತ್ರ ಇದೆ. ಇನ್ನು ಇತ್ತೀಚೆಗೆ ಹಲವಾರು ಕಡೆ ಅಳವಡಿಸಲಾಗಿರೋ ಎಲೆಟ್ರಾನಿಕ್ ಡಿಸ್ಪ್ಲೆ ಕಡೆ ನೋಡಿದ್ರೆ, ಅಲ್ಲೂ ಸಹ ಇದೆ ರೀತಿ ಜನರಿಗೆ ಗೊತ್ತಿಲ್ಲದ ಬಾಶೆಯಲ್ಲಿ ಜಾಗ್ರುತಿ ಮಾಡೊ ಪ್ರಯತ್ನ ಮಾಡ್ತಿರೋದು ಎದ್ದು ಕಾಣಿಸುತ್ತಿದೆ.

ಇನ್ನು ಟ್ರಾಫಿಕ್ ಪೋಲೀಸಿನವರು ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಮಾಡೊಕ್ಕೆ ಅಂತ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ತೆ ಮಾಡಿದ್ದಾರೆ. ಇದು ಒಂದು ಉತ್ತಮ ನಡೆಯೇ, ಆದ್ರೆ ಈ ವೀಡಿಯೋ ನಲ್ಲಿ ಜಾಗ್ರುತಿಗೆ ಅಂತ ಬಳಸಿರೋದು ಬೆಂಗಳೂರಿನ ಜನರಿಗೆ ಅರ್ತವಾಗದಿರೋ ಹಿಂದಿ ಬಾಶೆನ! ಜಾಗ್ರುತಿ ಮಾಡೊವಾಗ ಬಳಸಬೇಕಾದ್ದು ಜನರಿಗೆ ಗೊತ್ತಿರೋ ಕನ್ನಡ ಬಾಶೆನ ಹೊರೆತು, ಜನರಿಗೆ ತಿಳಿಯದ ಹಿಂದಿ ಬಾಶೆಯನ್ನಲ್ಲ ಅಲ್ವ?

ನಿಜವಾಗಿಯೂ ಪೋಲೀಸ್ ಇಲಾಕೆ ತನ್ನ ಜಾಗ್ರುತಿ ಮೂಡಿಸೋ ಕಾರ್ಯದಲ್ಲಿ ಕನ್ನಡವನ್ನ ಬಳಸಿದ್ರೆ, ಇಂದಿಗಿಂತ ಹೆಚ್ಹು ಪರಿಣಾಮಕಾರಿಯಾಗಿ ಜನರನ್ನ ಜಾಗ್ರುತರನ್ನಾಗಿ ಮಾಡೊಕ್ಕೆ ಸಾದ್ಯ ಅಲ್ವ?

ಟ್ರಾಪಿಕ್ ಸಮಸ್ಯೆಯನ್ನ ಜನರಲ್ಲಿ ಜಾಗ್ರುತಿ ಮಾಡೊದ್ರಿಂದ ಮಾತ್ರ ಕಡಿಮೆ ಮಾಡಬಹುದು, ಜಾಗ್ರುತಿಗೆ ಬಳಸೋ ಬಾಶೆ ಕೂಡ ಜನರಿಗೆ ಅರ್ತ ಆಗೋ ಬಾಶೆ, ಕನ್ನಡ ಆಗಿರಬೇಕು ಅಲ್ವ? ಏನಂತೀರ.

ಬುಧವಾರ, ಜೂನ್ 1, 2011

ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?


ಡಬ್ಬಿಂಗ್ ಬೇಡ ಎಂದು ಹೇಳುತ್ತಿರುವ ಬಿ ಸುರೇಶ ರವರು ಫೇಸ್ ಬುಕ್ ನಲ್ಲಿ ಕೆಲವು ಡಬ್ಬಿಂಗ್ ಪರವಾದ ಮಾತುಗಳನ್ನು ಪಟ್ಟಿ ಮಾಡಿ ಅದಕ್ಕೆ ಉತ್ತರಿಸಲು ಪ್ರಯತ್ಸಿಸಿದ್ದಾರೆ. ಡಬ್ಬಿಂಗ್ ಪರವಾದ ಹೆಚ್ಚು ಕಡಿಮೆ ಎಲ್ಲಾ ಮಾತುಗಳನ್ನ ಪಟ್ಟಿಮಾಡಿದ್ದಕ್ಕಾಗಿ ಮತ್ತು ಅದಕ್ಕೆ ಅರೋಗ್ಯಕರ ರೀತಿಯಲ್ಲಿ ಉತ್ತರಿಸಲು ಪ್ರಯತ್ಸಿಸಿದ್ದಕ್ಕೆ ನಾನು ಅಬಿನಂದಿಸುತ್ತೇನೆ.

ಡಬ್ಬಿಂಗ್ ಪರವಾದ ಮಾತುಗಳಲ್ಲಿ ಡಬ್ಬಿಂಗ್ ಬೇಕೆ ಬೇಡವೇ ಅನ್ನೊದನ್ನ ಪ್ರೇಕ್ಷಕ(ಮಾರುಕಟ್ಟೆ) ನಿರ್ದರಿಸರಿ ಅನ್ನೋದು ಒಂದು. ಇದೇ ವಾದ ನನ್ನದೂ ಕೂಡ. ಇದೇ ವಿಶಯವಾಗಿ ನನ್ನ ಬ್ಲಾಗಿನಲ್ಲೂ ಸಹ ಒಂದು ಲೇಖನ ಬರೆದಿದ್ದೇನೆ. ಆದರೆ ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ದರಿಸೋದು ಸರಿ ಅಲ್ಲ ಅನ್ನೋ ಹಾಗೆ ಬಿ ಸುರೇಶ ರವರು ಹೇಳಿದ್ದಾರೆ. ಇದರ ಬಗ್ಗೆ ಅವರ ಉತ್ತರ ನೋಡಿ-

'ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ಧರಿಸಲಿ’ ಎಂದು ಹಲವರು ಹೇಳಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಆ ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು. ಆ ಮೂಲಕ ಪ್ರಯೋಗಗಳು ಆಗಬೇಕು. ಇಲ್ಲವಾದರೆ ಸರಿಯಾಗಿ ಕುಡಿಯುವ ನೀರೇ ಇಲ್ಲದ, ಫ್ಲೋರೈಡ್‌ ಯುಕ್ತ ನೀರು ಕುಡಿದು ನರಳುತ್ತಿರುವವರಿರುವ ಹಳ್ಳಿಗಳಲ್ಲಿ ಧಾರಾಳವಾಗಿ ಪೆಪ್ಸಿ, ಕೋಕಾಕೋಲ ಸಿಗುತ್ತಿರುವಂತೆ ಆಗುತ್ತದೆ. ಯಾವುದೇ ಸರಕಿನ ಲಾಬಾಲಾಭಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನು ಬಳಸಿ ಎಂದು ಹೇರುವುದು ಆ ಸಮಾಜಕ್ಕೆ ಮಾಡುವ ಅಪರಾಧ ಎಂದು ನೋಮ್‌ ಚಾಮ್‌ಸ್ಕಿ ಯಂತಹ ಹಿರಿಯ ಅರ್ಥಶಾಸ್ತ್ರಜ್ಞರು. ಸಮಾಜ ಚಿಂತಕರು ಮಾಡಿರುವ ಚರ್ಚೆಗಳನ್ನು ಇದಕ್ಕಾಗಿ ಗಮನಿಸಬಹುದು. ಆ ಪುಸ್ತಕಗಳನ್ನು ಓದಲಾಗದವರು ಆಫ್ರಿಕಾದ ಗಿರಿಜನರ ಕಾಡಿನೊಳಗೆ ಬಂದು ಬೀಳುವ ಕೋಕ್ ಬಾಟಲಿಯಿಂದ ಒಂದು ಸಮಾಜವೇ ತಲ್ಲಣಗೊಳ್ಳುವ ಕತೆಯನ್ನುಳ್ಳ ಮಾತಿಲ್ಲದ ಸಿನಿಮಾ ನೋಡಬಹುದು. ಅಂತಹ ಸ್ಥಿತಿ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬರಬಾರದು. ಹೀಗಾಗಿ ಡಬ್ಬಿಂಗ್ ಬೇಕೆ ಬೇಡವೇ ಎಂಬ ವಿಷಯವನ್ನು ಪ್ರೇಕ್ಷಕರು ಅಥವಾ ಮಾರುಕಟ್ಟೆ ನಿರ್ಧರಿಸಲಿ ಎಂಬ ಮಾತು ಸರಿಯಾಗುವುದಿಲ್ಲ.

ಅವರ ಮಾತಿನ ಮೊದಲಿನಲ್ಲಿ ” ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು ಆ ಮೂಲಕ ಪ್ರಯೋಗಗಳು ಆಗಬೇಕು.” ಎಂದು ಹೇಳಿದ್ದಾರೆ ಇದು ಒಪ್ಪುವಂತಹ ಮಾತೆ, ಚರ್ಚೆ ಆಗಬೇಕೆ ಹೊರೆತು ಉದ್ಯಮದಲ್ಲಿ ಇರುವವರೇ ಬಳಸುವವರಿಗೆ ಏನು ಬೇಕು ಅಂತ ನಿರ್ದಾರ ಮಾಡೋದು ಎಶ್ಟು ಸರಿ? ಬಿ ಸುರೇಶರವರು ಹೇಳಿದ ಹಾಗೆ ಡಬ್ಬಿಂಗ್ ವಿಶಯವಾಗಿ ಯಾವುದಾದರೂ ಚರ್ಚೆ ನಡೆದಿದೆಯೇ ಅತವಾ ಡಬ್ಬಿಂಗ್ ಪ್ರಯೋಗಗಳು ನಡೆದಿದೆಯೇ? ಚರ್ಚೆ ನಡೆಯದೇ...... ಪ್ರಯೇಗ ನಡೆಸದೇ...... ಡಬ್ಬಿಂಗ್ ಬೇಡ ಅನ್ನೊದು ಎಶ್ಟು ಸರಿ?ಡಬ್ಬಿಂಗ್ ಪ್ರಯೋಗ ಆಗಲೇ ಬಾರದು ಅಂತ ಟೊಂಕ ಕಟ್ಟಿ ನಿಂತಿರೋ ಉದ್ಯಮದೊಳಗಿನ ಜನರನ್ನ ಏನನ್ನಬೇಕು

ಇದೇ ಉತ್ತರದ ಇನ್ನೊಂದೆಡೆ ಒಬ್ಬ ಹಿರಿಯ ಅರ್ತಶಾಸ್ತ್ರಜ್ನ ರ ಮಾತನ್ನ ಉಲ್ಲೆಕಿಸುತ್ತಾ ಲಾಬಾಲಾಬಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನ ಬಳಸಿ ಎಂದು ಹೇರುವುದ ಅಪರಾದ ಅಂತ ಹೇಳಿದ್ದಾರೆ. ಕನ್ನಡ ಪ್ರೇಕ್ಷಕ ಸಮಾಜ ಯಾವುದು ಸರಿ, ಯಾವುದು ತಪ್ಪು ಅನ್ನೊ ತಿಳುವಳಿಕೆ ಇಲ್ಲದ್ದೇ? ಅತವಾ ಕನ್ನಡದ ಪ್ರೇಕ್ಷಕರು ಲಾಬಲಾಬಗಳ ತಿಳುವಳಿಕೆ ಇಲ್ಲದವರೇ? ಪ್ರೇಕ್ಷಕರನ್ನ ತಿಳುವಳಿಕೆ ಇಲ್ಲದವರು ಅನ್ನೊದು ಮತ್ತು ಆ ರೀತಿಯ ವಾಕ್ಯಗಳ ಜೊತೆ ಉಲ್ಲೇಕಿಸಿ ಹೇಳೋದು ಸರಿಯೇ?


ಕನ್ನಡದ ಪ್ರೇಕ್ಷಕರಿಗೆ ಯಾವುದು ಸರಿ ಯಾವುದು ತಪ್ಪು ಅಂತ ನಿರ್ದಾರ ಮಾಡೋ ಸ್ವಾತಂತ್ರ ಮತ್ತು ತಿಳುವಳಿಕೆ ಇದೆ. ಡಬ್ಬಿಂಗ್ ಸಿನೆಮಾ ಬಿಡುವುದರಿಂದ ನಿಜವಾಗಿಯೂ ಪ್ರೇಕ್ಷಕರ ಸ್ವಾತಂತ್ರಕ್ಕೆ ಮತ್ತು ತಿಳುವಳಿಕೆಗೆ ಗೌರವ ನೀಡಿದಂತಾಗುತ್ತದೆ.

ಪ್ರೇಕ್ಷಕನಿಗೆ ಗೌರವ ಮತ್ತು ಸ್ವಾತಂತ್ರ ನೀಡೋ ಮನಸ್ಸು ಡಬ್ಬಿಂಗ್ ವಿರೋದಿಸೋ ಉದ್ಯಮದ ಜನರಿಗೆ ಇದೆಯೇ?

ಭಾನುವಾರ, ಮೇ 29, 2011

ಇದು ಹಿಂದಿ ಹೇರಿಕೆ ಬೂತದ ಕೈಚಳಕ

ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.



೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?





೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.







೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.





ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ

ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.

ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?

ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?

ಸೋಮವಾರ, ಮೇ 2, 2011

ಜಾತ್ರೆ,ಉತ್ಸವ, ಸಮ್ಮೇಳನಗಳ ಆಯೋಜಕರಿಗೆ ಕನ್ನಡದ ಬಗ್ಗೆ ಬದ್ದತೆಯಿದೆಯೇ?


ಸರಕಾರ ಜನರ ಸುಂಕದ ಹಣದಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳನ್ನ ನಡೆಸುತ್ತಿದೆ. ಆ ಸಮ್ಮೇಳನಗಳ, ಉತ್ಸವಗಳ ಉದ್ದೇಶ ಸರಿಯಾಗಿಯೇ ಇರಬಹುದು, ಆದ್ರೆ ಆ ಕಾರ್ಯಕ್ರಮಗಳು ನಡೆಯುವಾಗ ನಮ್ಮ ನಾಡಿಗೆ ಸಿಗಬೇಕಾದ ಮನ್ನಣೆ ಮತ್ತು ನಂತರದ ದಿನದಲ್ಲಿ ಕಾರ್ಯಕ್ರಮಗಳಿಂದ ಆಗಬೇಕಾದ ಬದಲಾವಣೆಗಳು ಆಗದಿರುವುದರಿಂದ ನಿಜವಾಗಿಯೂ ಈ ಸಭೆ ಸಮ್ಮೇಳನ, ಉತ್ಸವಗಳಿಗೆ ಕೋಟಿ ಕೋಟಿ ಹಣ ಸುರಿಯುವ ಅವಶ್ಯಕತೆ ಇದಯೇ



ಕೋಟಿ ಕೋಟಿ ಸುರಿದು ನಡೆಸುವ ಸಭೆ ಸಮಾರಂಬಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಡಿನ ಏಳಿಗೆಗೆ/ ನಾಡಿನ ಸಮಸ್ಯೆಯ ಪರಿಹಾರಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡು, ಆ ನಿರ್ಣಯಗಳ ಜಾರಿಗೊಳಿಸಿದಾಗಲೇ ಆ ಸಮ್ಮೇಳನಗಳು ಯಶಸ್ವಿಯಾದಂತೆ. ಸಮ್ಮೇಳನಗಳ ವೇದಿಕೆಯಲ್ಲಿ ಕನ್ನಡ.. ಕನ್ನಡ ಅನ್ನೊ ಸರಕಾರ, ಕಾರ್ಯಕ್ರಮ ಮುಗಿದ ನಂತರ ಕನ್ನಡವನ್ನೇ ಮರೆಯುತ್ತಿರುವುದು ಸರಿಯೇ? ನಿರ್ಣಯಗಳನ್ನು ತೆಗೆದುಕೊಡು, ನಿರ್ಣಯವನ್ನ ಜಾರಿಗೊಳಿಸದೇ, ಜನ ಸೇರಿದ್ದೇ ಯಶಸ್ವಿಯೆನ್ನುವುದು ಎಶ್ಟು ಸರಿ?

ಇದೀಗ ನಮ್ಮ ಮುಕ್ಯ ಮಂತ್ರಿಗಳ ಪೋಟೋ ಜೊತೆಗೆ, ಕಳೆದ ತಿಂಗ್ಳು ನಡೆದ ವಿಶ್ವ ಕನ್ನಡಿಗರ ಸಮ್ಮೇಳನ ಯಶಸ್ವಿ ಅಂತ ಎಲ್ಲಾ ಕಡೆ ಜಾಹಿರಾತು ನೀಡ್ತಿದ್ದಾರೆ. ನಿಜವಾಗಿಯೂ ವಿಶ್ವ ಕನ್ನಡಿಗರ ಸಮಾವೇಶ ಯಶಸ್ವಿ ಯಾಗಿದಿಯೇ?ಸಮ್ಮೇಳನ ನಡೆದ ಕೆಲವೇ ದಿನದಲ್ಲಿ ನಾಡ ವಿರೋದಿಗಳು ಬೆಳಗಾವಿ ನಗರ ಪಾಲಿಕೆಯಲ್ಲೇ ಮೇಲುಗೈ ಸಾದಿಸಲು ಸಹಾಯ ಮಾಡಿದವರು ಸಮ್ಮೇಳನ ಯಶಸ್ವಿ ಅನ್ನೋದು ಸರಿಯೇ? ೨೦ ಲಕ್ಷ ಜನ ಬಂದಿದಾರೆ ಅಂದ್ರೆ ಅದು ಯಶಸ್ವಿಯೇ? ಗಡಿನಾಡಿನಲ್ಲಿ ನಡೆದ ಸಮ್ಮೇಳನದಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು, ವಿಬಜನೆಯ ಕೂಗು ನಿಲ್ಲಬೇಕು ಎನ್ನೋ ಆಶಯ ಏನಾಯಿತು?

ಇದರ ಜೊತೆಗೆ ಸರಕಾರ ಗಡಿ ನಾಡಿನ ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಇಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಗಬೇಕು ಅಲ್ವ? ಜೊತೆಗೆ ಆಯಾ ಜಿಲ್ಲೆಯ ಕಲೆ ಸಂಸ್ಕೃತಿ ಗೆ ಮನ್ನಣೆ ಸಿಗ್ಬೇಕು ಅಲ್ವ?ಈ ಉತ್ಸವಗಳ ಮೂಲಕ ಸರಕಾರ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದಿತ್ತು. ಆದ್ರೆ ಇಲ್ಲಿ ನಡಿತಿರೋದೇ ಬೇರೆ, ಬೀದರ್, ಗುಲ್ಬರ್ಗ ಉತ್ಸವದಲ್ಲಿ ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ನಡೆಸಿ, ಹೆಚ್ಚು ಹೆಚ್ಚು ಹಿಂದಿ ಕಾರ್ಯಕ್ರಮ ನ ಆಯೋಜಿಸ್ತಿರೋದು ನೋಡಿದ್ರೆ ಸರಕಾರನೇ ಈ ಉತ್ಸವಗಳ ಮೂಲಕ ಹಿಂದಿ ಬಾಶೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಒಂದು ದುರಂತ.

ಇನ್ನು ನಾಡ ಹಬ್ಬ ಮೈಸೂರು ದಸರ, ಹಂಪಿ ಉತ್ಸವಕ್ಕೆ ಬಂದರೆ, ನಮ್ಮ ನಾಡ ಹಬ್ಬದಲ್ಲಿ ನಮ್ಮ ನಾಡಿನ ವಿಶಯಗಳಿಗೆ ಮನ್ನಣೆ ದೊರೆಯಬೇಕಾದುದ್ದು ನ್ಯಾಯಯುತವಾದುದು, ಇಲ್ಲೇನಾಗ್ತಿದೆ? ಯುವ ದಸರ ಹೆಸರಲ್ಲಿ ಹಿಂದಿ ಕಾರ್ಯಕ್ರಮ ನಡ್ತೆಸಿದ್ದಾರೆ, ಹಂಪಿ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ನಮ್ಮ ನಾಡಿಗೆ ಸಂಬಂದವಿಲ್ಲದ ಪರಬಾಶೆಯ ಕಲಾವಿದರಿಂದ ಪರಬಾಶೆಯ ಕಾರ್ಯಕ್ರಮ ನಡೆಸ್ತಿದ್ದಾರೆ.

ಇದನ್ನೆಲ್ಲಾ ನೋಡಿದ್ರೆ ನಿಜವಾಗಿಯೂ ಸಮ್ಮೇಳನ, ಉತ್ಸವ, ಜಾತ್ರೆ, ಹಬ್ಬಗಳನ್ನ ನಡೆಸೋ ಸರಕಾರ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ನಿಜವಾಗಿಯೂ ಬದ್ದತೆಯಿದೆಯೇ ಎನ್ನೊ ಪ್ರಶ್ನೆ ಹುಟ್ಟುತ್ತೆ.

ಗುರುವಾರ, ಏಪ್ರಿಲ್ 28, 2011

ಬಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.

ತುಂಬ ದಿನದಿಂದ ವಂಡರ್ ಲಾ ಗೆ ಹೋಗ್ಬೇಕು ಅಂತ ಅಂದ್ಕೊಂಡಿದ್ದೆ ಅದು ನೆನ್ನೆ ನೆರವೇರ್ತು. ನಮ್ಮ ಮನೆಯವರು ಮತ್ತು ನನ್ನ ಸ್ನೇಹಿತರ ಮನೆಯವರು ಜೊತೆಗೆ ಹೋಗಿದ್ವಿ,


ಅಲ್ಲಿ ಸ್ಕೈ ವೀಲ್ ನಲ್ಲಿ ಹೋಗೋಕ್ಕೆ ಅಂತ ೧೩ ಅಂತಸ್ತಿನ ಮಹಡಿಗೆ ಲಿಫ಼್ಟ್ ನಲ್ಲಿ ಹೋದ್ವಿ. ಆಟವನ್ನ ಮುಗಿಸಿ ವಾಪಸ್ ಬರಲು ಮತ್ತೆ ಲಿಪ್ಟ್ ಬಳಿ ಬಂದಾಗ ನಾವು, ಮತ್ತೆ ನಮ್ ಜೊತೆ ಲಿಪ್ಟ್ ಗಾಗಿ ಕಾಯ್ತಿದ್ದ ಚಿಕ್ಕ ಮಕ್ಕಳ ಗುಂಪೊಂದಿತ್ತು. ಅಲ್ಲೊಬ್ಬ ಸೆಕ್ಯುರಿಟಿ ನವನು ನಿಂತಿದ್ದ, ಲಿಪ್ಟ್ ಎಶ್ಟು ಹೊತ್ತಾದ ಮೇಲೂ ಕೆಳಗಿನಿಂದ ೧೩ ನೆ ಅಂತಸ್ತಿಗೆ ಬರಲೇ ಇಲ್ಲ, ಯಾಕಪ್ಪ ಲಿಪ್ಟ್ ಮೇಲಕ್ಕೆ ಬರ್ತಾನೇ ಇಲ್ಲ, ಏನಾದ್ರು ತೊಂದರೆಯಾಗಿದಿಯ ಅಂತ ಆ ಸೆಕ್ಯುರಿಟಿನವನನ್ನ ಕೇಳಿದಕ್ಕೆ, ಅವನು ಹಿಂದಿ.... ಹಿಂದಿ ಅಂದ, ಸರಿ ನಾವು ಏನಪ್ಪ ನಿಮ್ಮ ವಂಡರ್ ಲಾ ಗೆ ಬಂದು ಏನು ತೊಂದರೆ ಇಲ್ದೇ ವಾಪಸ್ ಹೋಗ್ಬೇಕಾದ್ರೆ ಹಿಂದಿ ಕಲಿತು ಬರ್ಬೇಕಾ ಅಂದ್ವಿ. ಅದುಕ್ಕೆ ಅವನು ಹಿಂದಿ ರಾಶ್ಟ್ರಬಾಶೆ , ಬಾರತದಲ್ಲಿ ಇರ್ಬೇಕು ಅಂದ್ರೆ ಹಿಂದಿ ಗೊತ್ತಿರಬೇಕು, ಇದು ಬಾರತ... ಇದು ಬಾರತ.... ಅಂತ ಹೇಳ್ತಿರ್ಬೇಕಾದ್ರೆ, ನಮ್ ಜೊತೆ ಇದ್ದ ಮಕ್ಕಳ ಗುಂಪಿಂದ ಒಂದು ಚಿಕ್ಕ ಹುಡುಗಿ(ಸುಮಾರು ೫ ನೆ ತರಗತಿ ಓಡ್ತಿರಬೇಕು) ಮುಂದೆ ಬಂದು"ಬಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ! "ಅಂತ ಹೇಳಿದ್ಲು. ಬಾರತದಲ್ಲಿ ಕನ್ನಡನೂ ಇದೆ ಅನ್ನೊದು ಆ ಪುಟ್ಟ ಹುಡುಗಿಗೆ ಕೂಡ ಗೊತ್ತಿದೆ, ಆದ್ರೆ ಇದು ನಮ್ಮ ದೇಶದ ಕೇಂದ್ರ ಸರಕಾರಕ್ಕೆ ಮತ್ತು ಹಿಂದಿನ ರಾಶ್ಟ್ರಬಾಶೆ ಅಂತ ಹೇಳೊ ಹಿಂದಿಯನ್ಸ್ ಗಳಿಗೆ ಗೊತ್ತಿಲ್ವಲ್ಲ.




ನಿಜವಾಗಿಯೂ ಹಿಂದಿಯೇತರರ ಮೇಲೆ ಹಿಂದಿಹೇರಿಕೆ ಮಾಡೋ ಕೇಂದ್ರ ಸರಕಾರ ಮತ್ತು ಒಂದಿಶ್ಟು ಜನ ಹಿಂದಿಯನ್ಸ್ ಗಳು ಹಿಂದಿನ ಸುಳ್ಳ್ ಸುಳ್ಳಾಗಿ ರಾಶ್ಟ್ರಬಾಶೆ ಅಂತ ಹೇಳ್ಕೊಡು ತಿರುಗ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಮತ್ತು ಹಿಂದಿ ರಾಶ್ಟ್ರಬಾಶೆ ಅನ್ನೊರಿಗೆಲ್ಲಾ ನಾವು ಕೊಡಬೇಕಾದ ಒಂದೇ ಒಂದು ಉತ್ತರ... ಬಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.

ಮಂಗಳವಾರ, ಏಪ್ರಿಲ್ 19, 2011

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ




ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.

ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.



ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಶೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ..... ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ.

ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಜನ ಅದೇ ಕನ್ನಡದ ಚಿತ್ರಗಳನ್ನ ಪರಭಾಷೆಗೆ ಡಬ್ ಮಾಡಿದಾಗ, ತಮ್ಮ ಮಾತನ್ನ ತಾವೇ ಮರೆತುಹೋಗುತ್ತಾರೆ. ನಿಜವಾಗಿಯೂ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ಸಂಸ್ಕೃತಿ ಹಾಳಾಗೋದಾದ್ರೆ, ಕನ್ನಡ ಚಿತ್ರ ಬೇರೆ ಭಾಷೆಗೆ ಡಬ್ ಆದಾಗ ಆ ಭಾಷೆಯ ಸಂಸ್ಕೃತಿ ಹಾಳಾಗೋದಿಲ್ವ?

ಡಬ್ಬಿಂಗ್ ನಿಂದ ತೊಂದರೆಗೆ ಒಳಗಾಗೋರು ಒಬ್ರೆ, ಅವ್ರು talent ಇಲ್ಲದೇ ಪರಭಾಷೆಯ ಚಿತ್ರಗಳನ್ನ ಬಟ್ಟಿ ಇಳಿಸಿ ಇದಕ್ಕೆ ಇನ್ಯಾವುದನ್ನೋ ಸೇರಿಸಿ ಕಲೆಸಿ/ಬೆರೆಸಿ ರೀಮೇಕ್ ಮಾಡೋ ಜನ ಮಾತ್ರ. ಕನ್ನಡ ಚಿತ್ರರಂಗದಲ್ಲಿರೋ ನಿಜವಾದ talent ಗಳಿಗೆ ಡಬ್ಬಿಂಗ್ ಅಲ್ಲ, ಇನ್ಯಾವುದೋ ಒಂದು ಬೇರೆ ಗ್ರಹದಿಂದ ಇಳಿದು ಬಂದ್ರು ತೊಂದರೆ ಆಗಲ್ಲ. ಡಬ್ಬಿಂಗ್ ಕನ್ನಡ ಚಿತ್ರ ರಂಗನ ಜರಡಿ ಆಡಿ ಇಲ್ಲಿ talent ಇರೋರು ಮಾತ್ರ ಉಳಿಯೋ ಹಾಗೆ ಮಾಡುತ್ತೆ.

ಡಬ್ಬಿಂಗ್ ವಿರೋಧಿಸೋರು ಕನ್ನಡ...ಕನ್ನಡ.....ಅಂತ ಮುಂದೆ ಹೇಳಿ ಹಿಂದೆ ಪರಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡೊಕ್ಕೆ ಹೊರಟು, ಪರಭಾಷೆಯ ಚಿತ್ರರಂಗದ ಏಜೆಂಟ್ಗಳಂತೆ ಆಡ್ತಿರೋದು ಬಹಳ ಆತಂಕಕಾರಿ. ಡಬ್ಬಿಂಗ್ ಗೆ ವಿರೋಧಿಸೋ ಜನ ಪರಬಾಷೆ ಚಿತ್ರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಕಡೆ ಬಿಡುಗಡೆ ಆಗ್ತಿರೋ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಥವಾ ಅದಕ್ಕೆ ಪರಹಾರ ಯಾಕೆ ಹುಡುಕ್ತಿಲ್ಲ? ಇದರಿಂದ ನಿಜವಾಗಿಯೂ ಇವರಿಗೆ ಕನ್ನಡದ ಬಗ್ಗೆ ಕಾಳಜಿ ಇದ್ಯ ಅನ್ನೋದೇ ಒಂದು ಪ್ರಶ್ನೆಯಾಗಿದೆ. ಇವರು ಡಬ್ಬಿಂಗ್ ವಿರೋಧಿಸುತ್ತಿರೋದು ತಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ಹೊರೆತು ಕನ್ನಡಕ್ಕಾಗಿ ಅಲ್ಲ.


ಡಬ್ಬಿಂಗ್ ನಿಂದ ಅದು ಹಾಳಾಗುತ್ತೆ ಇದು ಹಾಳಾಗುತ್ತೆ ಅಂತ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಹೊರಟಿರೋ ಜನರ ಮಾತನ್ನ ತಲೆಗೆ ಹಾಕಿಕೊಳ್ಳಬೇಡಿ. ಅದೇ ಜನ ನಾಳೆ ಕಾಫಿ ಶಾಪ್ ಚಿತ್ರ ತೆಲುಗುಭಾಷೆನಲ್ಲಿ ಬಿಡುಗಡೆ ಆದ್ರೆ first day first show ನಲ್ಲಿ ನೋಡ್ತಾರೆ. ಕಾಫಿ ಶಾಪ್ ಚಿತ್ರ ಕನ್ನಡದಲ್ಲಿ ಬಂದ್ರೆ ಒಳ್ಳೆದೇ ಅಲ್ವ? ಸುಮ್ನೆ ಕಾಫಿ ಶಾಪ್ ಚಿತ್ರ ಕನ್ನಡಕ್ಕೆ ಡಬ್ ಆಗೋದನ್ನ ಬೆಂಬಲಿಸಿ. ಬಿಡುಗಡೆ ಆದ್ಮೇಲೆ ಆರಾಮಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಕನ್ನಡದಲ್ಲೇ ಸಿನೆಮಾ ನೋಡಿ ಮಜ ಮಾಡಿ.

ಶುಕ್ರವಾರ, ಏಪ್ರಿಲ್ 15, 2011

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?


ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ ಸಂಭಂದವಿಲ್ಲದವರು. ಇದೀಗ ಇದೇ ಏಪ್ರಿಲ್ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ. ಯಾವೂದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಗ್ ಹೇಳಲಾಗಿದೆ.

ಗುಲ್ಬರ್ಗ ಉತ್ಸವದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗುಲ್ಬರ್ಗ ಜಿಲ್ಲೆಯ ಒಬ್ಬೇ ಒಬ್ಬ ಕಲಾವಿದನಿದ್ದಂತಿಲ್ಲ! ಗುಲ್ಬರ್ಗ ಜಿಲ್ಲೆ ಯಾವುದೇ ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ? ಜೊತೆಗೆ ಶಿವರಾಜ್ ಕುಮಾರ್, ಐಂದ್ರಿತಾ ರೇ ರವರನ್ನ ಬಿಟ್ರೆ ಇನ್ನೊಬ್ಬ ಕರ್ನಾಟಕದ ಕಲಾವಿದನಿದ್ದಂತಿಲ್ಲ. ಕಾರ್ಯಕ್ರಮದಲ್ಲಿ ಕಾಟಾಚಾರಕ್ಕೆ ಕರ್ನಾಟಕದ ಕಲಾವಿದರನ್ನ ಕರೆಸಿ ಯಾರೋ ಗುಲ್ಬರ್ಗ ಗೂ ಕರ್ನಾಟಕಕ್ಕೂ ಹತ್ತಿರದ ಸಂಬಂಧವಿರಲಿ ದೂರದ(10000 ಕಿಲೋಮೀಟರ್ ಗಿಂತ ಹೆಚ್ಚು ಅಂದುಕೊಳ್ಳಬಹುದು) ಸಂಬಂದವೂ ಇಲ್ಲದ ಹಿಂದಿಯ ಸುನಿದಿ ಚೌಹಾನ್, ಮಿಕಾ ಸಿಂಗ್, ಶಕ್ತಿಕುಮಾರ್, ಅದ್ನಾನ್ ಸಾಮಿ,ವಾರಸಿ ಸಹೋದರರಿಗೆ ರಾಜಗಂಬಳಿ ಹಾಸಿ ಸ್ವಾಗತ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸರಕಾರವೇ ಹಿಂದಿ ಭಾಷೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ದುರಂತ!!!!

ಗುಲ್ಬರ್ಗ ಉತ್ಸವ, ಗುಲ್ಬರ್ಗ ಜಿಲ್ಲೆಯ ಕಲೆ ಸಂಸ್ಖೃತಿಯ ಪ್ರತೀಕವಾಗಬೇಕಾಗಿತ್ತು. ಗುಲ್ಬರ್ಗ ಜಿಲ್ಲೆಯ ಕಲಾವಿದರಿಗೆ, ಕಲೆಗೆ ಪ್ರಾಮುಖ್ಯತೆ ದೊರೆಯಬೇಕಾಗಿತ್ತು.ಆದರೆ ಆಗಿದ್ದೇ ಬೇರೆ. ಖಾಸಗಿಯಾಗಿ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಕಾರ್ಯಕ್ರಮ ನಡೆಸಿದ್ದರೆ ಯಾರೂ ತೆಲೆಕೆಡೆಸಿಕೊಳ್ಳೊ ಅವಶ್ಯಕತೆ ಇರ್ತಿರ್ಲಿಲ್ಲ, ಆದ್ರೆ ನಮ್ಮ ನಾಡಿನ ಕಲೆ/ಕಲಾವಿದರಿಗೆ ಉತ್ತೇಜನ ನೀಡಬೇಕಾದ ಸರಕಾರವೇ ನಮ್ಮ ನಾಡಿನ ಕಲೆ/ಕಲಾವಿರರನ್ನ ಮೂಲೆಗುಂಪು ಮಾಡಿ ಹೊರ ರಾಜ್ಯದ ಕಲೆ/ ಕಲಾವಿದರಿಗೆ ಪ್ರಾಮುಖ್ಯತೆ ನೀಡೋದು ಎಷ್ಟು ಸರಿ? ಕರ್ನಾಟಕದವರ ತೆರಿಗೆ ಹಣದಲ್ಲಿ ಈ ರೀತಿ ಕಾರ್ಯಕ್ರಮ ನಡೆಸೋದ್ರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡಕ್ಕೆ ಏನು ಉಪಯೋಗ?

ಕೊನೆಯದಾಗಿ- ಸರಕಾರ ಕೋಟಿ ಕೋಟಿ ಖರ್ಚು ಮಾಡಿ ಕನ್ನಡ ಸಮ್ಮೇಳನಗಳನ್ನ ಆಯೋಜನೆ ಮಾಡುತ್ತೆ ಜೊತೆಗೆ ಕನ್ನಡ ಅಭಿವ್ರುದ್ದಿ ಪ್ರಾಧಿಕಾರ ಗಡಿನಾಡ ಉತ್ಸವ ನಡೆಸಿ ಕನ್ನಡದ ವಾತಾವರಣ ನಿರ್ಮಾಣ ಮಾಡ್ತಿವಿ ಅನ್ನುತ್ತೆ. ಇನ್ನೊಂದೆಡೆ ಅದೇ ಸರಕಾರ ಉತ್ಸವ ನಡೆಯೋ ಪ್ರದೇಶಗಳು ಕರ್ನಾಟಕದಲ್ಲೇ ಇಲ್ಲವೆಂಬಂತೆ, ನಮಗೆ ಸಂಬಂಧವಿಲ್ಲದ ಕಾರ್ಯಕ್ರಮವನ್ನ ಆಯೋಜಿಸಿ ನಾಡಿನ ಜನರನ್ನು ನಾಡಿನಿಂದಲೇ ದೂರವಿಡುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಇಲ್ಲಿ ಪೋಲಾಗುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣ ಮಾತ್ರ.


ಉತ್ಸವದ ವೆಬ್ ವಿಳಾಸ- http://www.gulbargafestival.com/