ಕನ್ನಡ ಗ್ರಾಹಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಗ್ರಾಹಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜುಲೈ 11, 2013

ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನ ಕೊನೆಗೊಳ್ಳಲಿ

ಸಾರ್ವಜನಿಕರ ಹೆಚ್ಚು ಸಂಪರ್ಕವಿರುವ ಇಲಾಖೆಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ನಾಗರೀಕರು ಹಳ್ಳಿಯಲ್ಲೇ ಇರಲಿ ನಗರಗಳಲ್ಲೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಈ ಇಲಾಖೆಯ ಸೇವೆಯನ್ನು ಪಡೆದಿರುತ್ತಾರೆ.
ಅಂಚೆ ಇಲಾಖೆಯು ಕರ್ನಾಟಕದಾದ್ಯಂತ ವ್ಯಾಪಿಸಿರುವುದರಿಂದ ಕರ್ನಾಟಕದ ಜನರ ಭಾಷೆಯಾದ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದು ಸೇವೆಯನ್ನು ಪಡೆಯುವ ನಾಗರೀಕರಿಗೆ ಇಲಾಖೆಯೊಂದಿಗಿನ ವ್ಯವಹಾರ ಸುಲಭವಾಗಿಸುತ್ತದೆ

ಆದರೆ ಇತರೇ ಕೇಂದ್ರ ಸರಕಾರಗಳ ಮನಸ್ಥಿತಿಯೇ ಅಂಚೆ ಇಲಾಖೆಯಲ್ಲೂ ಪ್ರತಿಧ್ವನಿಸುತ್ತಿದೆ. ಇತರೇ ಕೇಂದ್ರ ಸರಕಾರದ ಇಲಾಖೆಯಂತೆಯೇ ಕರ್ನಾಟಕದಲ್ಲಿ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದರ ಬಗ್ಗೆ ಅಂಚೆ ಇಲಾಖೆಯೂ ಸಹ ಬಹಳ ಹಗುರವಾದ ಭಾವನೆಯನ್ನು ಹೊಂದಿರುವಂತಿದೆ. ಕನ್ನಡದೆಡೆಗಿನ ಹಗುರ ಭಾವನೆಯು ಕರ್ನಾಟಕದ ಕೊಟ್ಯಾಂತರ ಕನ್ನಡಿಗರು ತೊಂದರೆಗೆ ಗುರಿಯಾಗುವಂತೆ ಮಾಡಿದೆ. ಕೇಂದ್ರ ಸರಕಾರದ ಹುಳುಕು ಭಾಷಾನೀತಿಯು ಕೇಂದ್ರ ಸರಕಾರದ ಇಲಾಖೆಗಳ ಕನ್ನಡ ವಿರೊಧಿ ನಿಲುವಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು

ಅಂಚೆ ಇಲಾಖೆಯಲ್ಲಿ ದೊರೆಯುವ ಪಾರಂಗಳು ಸೇರಿದಂತೆ ಇತರೇ ಸೇವೆಗಳಲ್ಲಿ ಕನ್ನಡ ಇಲ್ಲದ ಬಗ್ಗೆ ಕನ್ನಡ ಗ್ರಾಹಕ ಕೂಟದ ಗೆಳೆಯರು ಅನೇಕ ದೂರುಗಳನ್ನು ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲದಿರುವುದು ದುರಂತವೇ ಸರಿ.

ಅಂಚೆ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅನೇಕ ರೀತಿಯ ದೂರುಗಳ ಅನ್ವಯ ಅಂಚೆ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಹೋದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರತಿನಿಧಿಗಳ ಜೊತೆಗೆ ಅಂಚೆ ಇಲಾಖೆಯ ಅಧಿಕಾರಿಯು ಉದ್ದಟತನ ತೊರಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರದ ಇಲಾಖೆಗಳು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಹೊಂದಿರುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಇಲಾಖೆಗಳು ಕನ್ನಡದಲ್ಲಿ ಸೇವೆ ನೀಡುವ ಮತ್ತು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರ ಭಾವನೆ ಹೊಂದಿರುವ ಮನಸ್ಥಿತಿಯ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನವನ್ನು  ಕೊನೆಗಾಣಿಸಲಿ.

ಮಂಗಳವಾರ, ಜನವರಿ 8, 2013

ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಲು ಕೀಳರಿಮೆಯೇಕೆ?

ಕಾಪಿ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದರ ಬಗ್ಗೆ ಕಾಪಿ ಡೇ ಗೆ ಹೋಗಿದ್ದ ಗೆಳೆಯರೊಬ್ಬರು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಪಿ ಡೇ ತಾವು ದೇಶದ ಎಲ್ಲಾ ಅಂಗಡಿಗಳಲ್ಲೂ ಒಂದೇ ತರನಾದ ವಾತಾವಣವನ್ನು ಹೊಂದಲು, ಹಿಂದಿ/ ಇಂಗ್ಲೀಶ್ ಗೀತೆಗಳನ್ನು ಮಾತ್ರ ಹಾಕುತ್ತೇವೆಂದು ತಿಳಿಸಿದ್ದಾರೆ. 


ಕಾಪಿ ಡೇ ಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಂಗಡಿಯನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಹಿಂದಿ/ಇಂಗ್ಲೀಶ್ ಹಾಡುಗಳನ್ನು ಮಾತ್ರ ಹಾಕುತ್ತೇವೆ ಎನ್ನುವ ಮೂಲಕ ಕಂಪನಿಯು ತನ್ನ ಗ್ರಾಹಕರು, ಬೇಕಿದ್ದರೆ ಬರಲಿ ಇಲ್ಲವೇ ಬಿಡಲಿ ಎನ್ನುವಂತೆ ಆಡುತ್ತಿರುವುದು ಎಶ್ಟರ ಮಟ್ಟಿಗೆ ಸರಿ?

ಹೊರದೇಶದ ಅನೇಕ ಕಾಪಿ ಡೇ ತರನಾದ ಅಂಗಡಿಗಳು ಬಾರತದ ವೈವಿದ್ಯತೆಯನ್ನು ಗೌರವಿಸುವುದನ್ನು ನೋಡಿದ್ದೇನೆ ಆದರೆ ಕಾಪಿ ಡೇಯ ಈ ಉತ್ತರವನ್ನು ಗಮನಿಸಿದ್ರೆ, ಕಾಪಿ ಡೇ ತನ್ನ ಗ್ರಾಹಕರನ್ನು ಸರಿಯಾಗಿ ಅರ್ತ ಮಾಡಿಕೊಳ್ಳಲು ಎಡವುತ್ತಿರುವುದು ಕಾಣಿಸುತ್ತದೆ. ಬಾರತದಂತ ವೈವಿದ್ಯಮಯ ದೇಶದಲ್ಲಿ ದೇಶಕ್ಕೆಲ್ಲಾ ಒಪ್ಪುವಂತೆ ಒಂದೇ ನಿಯಮ ಮಾಡ್ತಿವಿ ಅನ್ನೋದು  ವೈವಿದ್ಯತೆಯಿಂದ ಕೂಡಿರುವ ಗ್ರಾಹಕರು ತಮಗೆ ಬೇಡ ಎನ್ನುವಂತಿದೆ. ಕಾಪಿ ಡೇ ನಂತೆಯೇ ಹೊರದೇಶಗಳ ಅಂಗಡಿಗಳು ಇದೇ ರೀತಿ ವೈವಿದ್ಯತೆಯನ್ನು ಬದಿಗೊಡ್ಡಿ ನಿಯಮ ಮಾಡಿದಲ್ಲಿ ಮುಂದೆ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಅಸಾದ್ಯ. 

ಈ ರೀತಿಯ ಗ್ರಾಹಕ ವಿರೋದಿ ನಿಯಮವನ್ನು ಮಾಡಿಕೊಳ್ಳಲು, ಇಂದಿಗೂ ಅನೇಕ ಕನ್ನಡದ  ಗ್ರಾಹಕರು ತಮ್ಮ ಬಾಶೆಯಲ್ಲಿ ಸೇವೆ ಕೇಳುವುದು ತಪ್ಪು ಎನ್ನುವಂತಹ ಮನಸ್ತಿತಿ ಹೊಂದಿರುವುದು ಕಾರಣವಾಗಿದೆ. ಕನ್ನಡಿಗರು ತಮ್ಮ ಬಾಶೆಯ ಬಗೆಗಿನ ಕೀಳರಿಮೆಯನ್ನು ತೊಡೆದು ಇಂತಹಾ ನಿಯಮಗಳನ್ನು ಪ್ರಶ್ನಿಸಿದಲ್ಲಿ,  ನಿಯಮ ಬದಲಾಗಿ ಎಲ್ಲೆಡೆ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾದ್ಯವಾದೀತು. 

ತಾವು ಕಾಪಿ ಡೇ ಗೆ ಹೋದ ಸಮಯದಲ್ಲಿ ಅಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಸಲಹೆಯನ್ನು ನೀಡಿ ಬನ್ನಿ. ಜೊತೆಗೆ ಕೆಳಗಿನ ಕೊಂಡಿಯಲ್ಲೂ ಸಹ ಈ ವಿಶಯದ ಬಗ್ಗೆ ಪ್ರಸ್ತಾಪಿಸಬಹುದು- 


ಭಾನುವಾರ, ಮಾರ್ಚ್ 18, 2012

ಹಿಂದಿಯನ್ನು ಕನ್ನಡದಲ್ಲಿ ಬರೆದರೆ ಕನ್ನಡವಾಗುತ್ತದೆಯೇ?




ಮೇಲಿರುವ ಎರಡೂ ಚಿತ್ರಗಳು ಕನ್ನಡ ಪತ್ರಿಕೆಗಳಲ್ಲಿ ಸಾಗರೋತ್ತರ ಬಾರತೀಯ ವ್ಯವಹಾರಗಳ ಸಚಿವಾಲಯದವರು ನೀಡಿರುವ ಜಾಹಿರಾತುಗಳು ಈ ಎರಡೂ ಜಾಹಿರಾತುಗಳ ಮೂಲಕ ಸಚಿವಾಲಯವು ಜನರಿಗೆ  ಜಾಗ್ರುತಿ ಮೂಡಿಸುವುದರ ಜೊತೆಗೆ ಮುಕ್ಯವಾದ ಕೆಲವು ವಾಕ್ಯಗಳನ್ನು ಹಿಂದಿಯಲ್ಲಿ ಹೇಳಿ ಅದೇ ವಾಕ್ಯವನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಿಂದಿಯನ್ನು ಕನ್ನಡದಲ್ಲಿ ಬರೆದಾಕ್ಷಣ ಅದು ಕನ್ನಡವಾಗುವುದೇ ಅತವಾ ಜನರಿಗೆ ಆ ವಾಕ್ಯದ ಅರ್ತ ಅರಿವಿಗೆ ಬರುವುದೇ? ಈ ರೀತಿ ಕನ್ನಡದಲ್ಲಿ ಹಿಂದಿಯ ವಾಕ್ಯವನ್ನು ಬರೆದು ಅತವಾ ಸಂಪೂರ್ಣವಾಗಿ ಹಿಂದಿಯಲ್ಲೇ ಬರೆದು ಕನ್ನಡ ಪತ್ರಿಕೆಗಳಲ್ಲ್ಲಿ ಪ್ರಕಟಿಸುತ್ತಿರುವುದು ಇದೇ ಮೊದಲೇನಲ್ಲ. ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಅತವಾ ಹಿಂದಿಯ ವಾಕ್ಯವನ್ನು ಕನ್ನಡದಲ್ಲಿ ಬರೆದ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ  ತಪ್ಪುಗಳಲ್ಲ,  ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೊದು ಗೊತ್ತಾಗದ ವಿಶಯವೇನಲ್ಲ,   ಈ ವ್ಯವಸ್ತಿತ ಸ೦ಚು ನಿದಾನವಾಗಿ ಹಿಂದಿಯನ್ನು ಕರ್ನಾಟಕದಲ್ಲಿ ನುಗ್ಗಿಸುವ ಪ್ರಯತ್ನ ಎಂದು ಹೇಳಬಹುದು. ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ಸಿಗುವಂತೆ ಮಾಡಲೆಂದೇ ಇಂದು ಕೆಲವು ಕಡೆಗಳಲ್ಲಿ ಹಿಂದಿ ಬಳಸಿ, ಮುಂದೊಂದು ದಿನ ಸಂಪೂರ್ಣವಾಗಿ ಹಿಂದಿ ಬಳಸುವ ಹುನ್ನಾರ ನಡೆಸುತ್ತಿರುವುದು. ಇಂದು ಕೆಲವು ಜಾಹಿರಾತುಗಳಲ್ಲಿ ಹಿಂದಿಯನ್ನು ಹಾಕುತ್ತಿರುವವರು ಮುಂದೊಂದು ದಿನ ಎಲ್ಲಾ ಜಾಹಿರಾತುಗಳಲ್ಲಿ ಸಂಪೂರ್ಣ ಹಿಂದಿಯನ್ನು ಬಳಸಿ ಅದರ ಮೂಲಕ ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ದೊರಕುವಂತೆ ಆದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. 

ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ ಹಿಂದಿಯೇತರ ನಾಡಿಗೆ ಅಕ್ರಮವಾಗಿ ಹಿಂದಿಯನ್ನು ನುಗ್ಗಿಸಿ ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಹಿಂದಿಯೇತರರೂ ಹಿಂದಿ ಬಾಶಿಕರಶ್ಟೆ ಹಕ್ಕನ್ನು ಹೊಂದಿಲ್ಲವೇ?

ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?