ಸಾರ್ವಜನಿಕರ ಹೆಚ್ಚು ಸಂಪರ್ಕವಿರುವ ಇಲಾಖೆಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ನಾಗರೀಕರು ಹಳ್ಳಿಯಲ್ಲೇ ಇರಲಿ ನಗರಗಳಲ್ಲೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಈ ಇಲಾಖೆಯ ಸೇವೆಯನ್ನು ಪಡೆದಿರುತ್ತಾರೆ.
ಅಂಚೆ ಇಲಾಖೆಯು ಕರ್ನಾಟಕದಾದ್ಯಂತ ವ್ಯಾಪಿಸಿರುವುದರಿಂದ ಕರ್ನಾಟಕದ ಜನರ ಭಾಷೆಯಾದ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದು ಸೇವೆಯನ್ನು ಪಡೆಯುವ ನಾಗರೀಕರಿಗೆ ಇಲಾಖೆಯೊಂದಿಗಿನ ವ್ಯವಹಾರ ಸುಲಭವಾಗಿಸುತ್ತದೆ
ಆದರೆ ಇತರೇ ಕೇಂದ್ರ ಸರಕಾರಗಳ ಮನಸ್ಥಿತಿಯೇ ಅಂಚೆ ಇಲಾಖೆಯಲ್ಲೂ ಪ್ರತಿಧ್ವನಿಸುತ್ತಿದೆ. ಇತರೇ ಕೇಂದ್ರ ಸರಕಾರದ ಇಲಾಖೆಯಂತೆಯೇ ಕರ್ನಾಟಕದಲ್ಲಿ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದರ ಬಗ್ಗೆ ಅಂಚೆ ಇಲಾಖೆಯೂ ಸಹ ಬಹಳ ಹಗುರವಾದ ಭಾವನೆಯನ್ನು ಹೊಂದಿರುವಂತಿದೆ. ಕನ್ನಡದೆಡೆಗಿನ ಹಗುರ ಭಾವನೆಯು ಕರ್ನಾಟಕದ ಕೊಟ್ಯಾಂತರ ಕನ್ನಡಿಗರು ತೊಂದರೆಗೆ ಗುರಿಯಾಗುವಂತೆ ಮಾಡಿದೆ. ಕೇಂದ್ರ ಸರಕಾರದ ಹುಳುಕು ಭಾಷಾನೀತಿಯು ಕೇಂದ್ರ ಸರಕಾರದ ಇಲಾಖೆಗಳ ಕನ್ನಡ ವಿರೊಧಿ ನಿಲುವಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು
ಅಂಚೆ ಇಲಾಖೆಯಲ್ಲಿ ದೊರೆಯುವ ಪಾರಂಗಳು ಸೇರಿದಂತೆ ಇತರೇ ಸೇವೆಗಳಲ್ಲಿ ಕನ್ನಡ ಇಲ್ಲದ ಬಗ್ಗೆ ಕನ್ನಡ ಗ್ರಾಹಕ ಕೂಟದ ಗೆಳೆಯರು ಅನೇಕ ದೂರುಗಳನ್ನು ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲದಿರುವುದು ದುರಂತವೇ ಸರಿ.
ಅಂಚೆ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅನೇಕ ರೀತಿಯ ದೂರುಗಳ ಅನ್ವಯ ಅಂಚೆ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಹೋದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರತಿನಿಧಿಗಳ ಜೊತೆಗೆ ಅಂಚೆ ಇಲಾಖೆಯ ಅಧಿಕಾರಿಯು ಉದ್ದಟತನ ತೊರಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರದ ಇಲಾಖೆಗಳು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಹೊಂದಿರುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಇಲಾಖೆಗಳು ಕನ್ನಡದಲ್ಲಿ ಸೇವೆ ನೀಡುವ ಮತ್ತು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರ ಭಾವನೆ ಹೊಂದಿರುವ ಮನಸ್ಥಿತಿಯ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನವನ್ನು ಕೊನೆಗಾಣಿಸಲಿ.



